ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಕಂಚು ಗೆದ್ದ ಭವಾನಿಗೆ ಅದ್ಧೂರಿ ಸ್ವಾಗತ

ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಸಾಧಕಿಗೆ ರೈಲು ನಿಲ್ದಾಣದಲ್ಲಿ ಜೈಕಾರ
Published 13 ಆಗಸ್ಟ್ 2023, 6:26 IST
Last Updated 13 ಆಗಸ್ಟ್ 2023, 6:26 IST
ಅಕ್ಷರ ಗಾತ್ರ

ಮಂಗಳೂರು: ಚೀನಾದ ಚೆಂಗ್ಡುವಿನಲ್ಲಿ ಈಚೆಗೆ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದ ಮಹಿಳೆಯರ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ನಗರಕ್ಕೆ ಮರಳಿದ ಆಳ್ವಾಸ್‌ ವಿದ್ಯಾಸಂಸ್ಥೆಯ ಕ್ರೀಡಾಪಟು ಭವಾನಿ ಭಗವತಿ ಯಾದವ್ ಅವರಿಗೆ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಲ್ಲಿ ಶನಿವಾರ ಅದ್ಧೂರಿ ಸ್ವಾಗತ ನೀಡಲಾಯಿತು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ‘ದತ್ತು ಸ್ವೀಕಾರ ಯೋಜನೆ’ಯಡಿ ಸಂಸ್ಥೆಯ ಕೋಚ್‌ ಅಜಿತ್‌ ಕುಮಾರ್‌ ಅವರ ಬಳಿ ತರಬೇತಿ ಪಡೆಯುತ್ತಿರುವ ಆಂಧ್ರಪ್ರದೇಶದ ವಿಜಯವಾಡದ ಭವಾನಿ ಈ ಕ್ರೀಡಾಕೂಟದಲ್ಲಿ 6.32 ಮೀ. ದೂರಕ್ಕೆ ಜಿಗಿಯುವ ಮೂಲಕ ಭಾರತಕ್ಕೆ ಪದಕ ಗೆದ್ದಿದ್ದರು. ಈ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್‌ ವಿಭಾಗದಲ್ಲಿ ದೇಶಕ್ಕೆ ಪದಕ ತಂದುಕೊಟ್ಟ ಮೂರನೇ ಅಥ್ಲೀಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರನ್ನು ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹೂ ಹಾರ ಹಾಕಿ, ಜೈಕಾರ ಕೂಗಿ ಬರಮಾಡಿಕೊಂಡರು.

ಜಾಗತಿಕ ಕ್ರೀಡಾಕೂಟದಲ್ಲಿ ಚೊಚ್ಚಲ ಕ್ರೀಡಾಕೂಟದಲ್ಲಿ ಪದಕ ಖುಷಿಯನ್ನು ’ಪ್ರಜಾವಾಣಿ’ ಜೊತೆ ಹಂಚಿಕೊಂಡ ಭವಾನಿ, ‘ಚೀನಾದ ಚೆಂಗ್ಡುವಿನಲ್ಲಿ ಪದಕ ಗೆದ್ದ ಬಗ್ಗೆ ಖುಷಿ ಇದೆ. ಕಳೆದ ಜುಲೈನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ 6.44 ಮೀಟರ್ ದೂರಕ್ಕೆ ಜಿಗಿದಿದ್ದೆ. ಚೆಂಗ್ಡುವಿನಲ್ಲೂ ಅಷ್ಟು ದೂರ ಜಿಗಿಯುತ್ತಿದ್ದರೆ ನನಗೆ ಬೆಳ್ಳಿ ಪದಕ ಸಿಗುತ್ತಿತ್ತು. ಇದು ಸಾಧ್ಯವಾಗಲಿಲ್ಲವಲ್ಲ ಎಂಬ ಬಗ್ಗೆ ಸಣ್ಣ ಬೇಸರವಿದೆ. ನನ್ನ ಮೊದಲ ಜಾಗತಿಕ ಕ್ರೀಡಾಕೂಟವಿದು. ಬೇರೆ ಬೇರೆ ದೇಶಗಳ ಅಥ್ಲೀಟ್‌ಗಳ ತಯಾರಿ ನೋಡಿ ಸ್ವಲ್ಪ ವಿಚಲಿತಳಾಗಿದ್ದೆ. ನನ್ನ ಕೋಚ್‌ ಅಜಿತ್‌ ಕುಮಾರ್‌ ಅವರು ಸ್ಥೈರ್ಯ ತುಂಬಿದ್ದರಿಂದ ದೇಶಕ್ಕೆ ಪದಕ ಗೆಲ್ಲಲು ಸಾಧ್ಯವಾಯಿತು’ ಎಂದರು.

‘ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅನ್ನು 2020ರಲ್ಲಿ ಪೂರ್ಣಗೊಳಿಸಿದ್ದೆ. ಹೆಚ್ಚಿನ ಕೋಚ್‌ಗಳು 16 ವರ್ಷ ಅಥವಾ 18 ವರ್ಷದೊಳಗಿನವರಿಗೆ ಮಾತ್ರ ತರಬೇತಿ ನೀಡಲು ಆಸಕ್ತಿ ತೋರಿಸುತ್ತಾರೆ. ಆದರೆ, ಅಜಿತ್‌ ಕುಮಾರ್‌ ಅವರು ನನ್ನ ವಯಸ್ಸಿನ ಬಗ್ಗೆ ಚಿಂತಿಸದೇ, ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡಿದ್ದಾರೆ. ಅವರು ಸಲಹೆ ನೀಡಿದಂತೆ ಸಿದ್ಧತೆ ನಡೆಸುವುದಷ್ಟೇ ನನ್ನ ಕೆಲಸ. ಅವರ ಮಾರ್ಗದರ್ಶನದಲ್ಲಿ  ನನ್ನಿಂದ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದೇನೆ’ ಎಂದರು. 

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್‌ ವಿದ್ಯಾಸಂಸ್ಥೆಯ ಅಧಿಕಾರಿಗಳು  ಭವಾನಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಅವರ ಕೋಚ್ ಅಜಿತ್‌ ಕುಮಾರ್‌ ಹಾಗೂ ಚೆಂಗ್ಡುವಿನಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಟಾಲಿನ್‌ ಅವರೂ ಇದ್ದರು.

ರೈಲು ನಿಲ್ದಾಣದಲ್ಲಿ ನನಗೆ ಸಿಕ್ಕ ಅದ್ಧೂರಿ ಸ್ವಾಗತದಿಂದ ಮನತುಂಬಿ ಬಂದಿದೆ. ಇನ್ನಷ್ಟು ಸಾಧನೆಗೆ ಇದು ಸ್ಫೂರ್ತಿ ನೀಡಿದೆ
ಭವಾನಿ ಭಗವತಿ ಯಾದವ್‌ ಲಾಂಗ್‌ಜಂಪ್‌ ಅಥ್ಲೀಟ್‌
ನೆರವಿನ ನಿರೀಕ್ಷೆಯಲ್ಲಿದ್ದೇನೆ:
ಭವಾನಿ ‘ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು ಆಳ್ವಾಸ್‌ ವಿದ್ಯಾಸಂಸ್ಥೆ. ಉಚಿತ ಹಾಸ್ಟೆಲ್‌ ಹಾಗೂ ಕ್ರೀಡಾ ತಯಾರಿಗೆ ಸೌಕರ್ಯ ಕಲ್ಪಿಸುವ ಮೂಲಕ ನನ್ನ ಸಾಧನೆಗೆ ನೆರವಾದ ಡಾ.ಎಂ.ಮೋಹನ ಆಳ್ವ ಹಾಗೂ ವಿವೇಕ ಆಳ್ವ ಅವರ ಸಹಾಯವನ್ನು ಮರೆಯಲು ಸಾಧ್ಯವಿಲ್ಲ. ನನ್ನ ತಂದೆ ಆಂಧ್ರಪ್ರದೇಶದ ವಿಜಯವಾಡದವರು. ಅವರೂ ತಮ್ಮಿಂದಾದಷ್ಟು ನೆರವಾಗುತ್ತಿದ್ದಾರೆ. ನನಗೊಂದು ನೌಕರಿ ಸಿಕ್ಕರೆ ಕ್ರೀಡಾ ತಯಾರಿಗೆ ಸಹಾಯವಾಗಲಿದೆ. ಕ್ರೀಡಾ ಉಪಕರಣಗಳ ಖರೀದಿಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ನೆರವನ್ನು ನಿರೀಕ್ಷಿಸುತ್ತಿದ್ದೇನೆ’ ಎಂದು ಭವಾನಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಪಿ.ಜಿ. ಡಿಪ್ಲೊಮಾ ಇನ್ ಬಿಜಿನೆಸ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT