ಬಂಟ್ವಾಳ (ದಕ್ಷಿಣ ಕನ್ನಡ): ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯ ಕಾರಣ ಮನೆಯ ಮೇಲೆ ಸಮೀಪದ ಗುಡ್ಡ ಜರಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಮನೆಯೊಳಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ.
ಬಂಟ್ವಾಳ ತಾಲ್ಲೂಕಿನ ಸಜೀಪ ಮುನ್ನೂರು ಗ್ರಾಮದ ನಂದಾವರದಲ್ಲಿ ಶುಕ್ರವಾರ ಬೆಳಿಗ್ಗೆ ಘಟನೆ ನಡೆದಿದೆ.
ಗ್ರಾಮದ ಗುಂಪು ಮನೆಗಳ ಪೈಕಿ ಮಹಮ್ಮದ್ ಎಂಬುವರ ಮನೆ ಮೇಲೆ ಗುಡ್ಡ ಜರಿದು ಬಿದ್ದಿದೆ. ಮನೆಯ ಒಳಗಿದ್ದ ಮಹಮ್ಮದ್ ಅವರ ಪತ್ನಿ ಝರಿನಾ (49) ಮತ್ತು ಪುತ್ರಿ ಶಫಾ (20) ಸಿಕ್ಕಿಕೊಂಡಿದ್ದರು. ಝರೀನಾ ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.