ವಿದ್ಯುತ್ ತಂತಿಗೆ ಸ್ಪರ್ಶಿಸುವ ಮರದ ಕೊಂಬೆಗಳನ್ನು ಪ್ರತಿ ಮಳೆಗಾಲ ಆರಂಭಕ್ಕೆ ಮೊದಲು ಮೆಸ್ಕಾಂ ಇಲಾಖೆಯವರು ಕಡಿದು ಮುನ್ನೆಚ್ಚರಿಕೆ ವಹಿಸುತ್ತಾರೆ. ಕಟಾವು ಮಾಡಿದ ಮರದ ಗೆಲ್ಲುಗಳು ರಸ್ತೆಗೆ, ಚರಂಡಿಗೆ ಬಿದ್ದಿದ್ದರೆ ಅದನ್ನು ಅಲ್ಲಿಂದ ತೆರವುಗೊಳಿಸುವ ಜವಾಬ್ದಾರಿಯೂ ಮೆಸ್ಕಾಂನವರದ್ದೆ ಆಗಿದ್ದು, ರೇಂಜ್ ಫಾರೆಸ್ಟ್ ರಸ್ತೆ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಕಟಾವು ಮಾಡಿದ ಗೆಲ್ಲುಗಳನ್ನು ರಸ್ತೆ ಬದಿಯಲ್ಲಿ, ಇನ್ನು ಕೆಲವೆಡೆ ಚರಂಡಿಯಲ್ಲೆ ಬಿಟ್ಟು ಹೋಗಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ. ಇದೇ ಪರಿಸರದ ಕೆಲವೆಡೆ ಚರಂಡಿ ಮೇಲೆ ಗೆಲ್ಲುಗಳು ಬಿದ್ದು ಚರಂಡಿ ಕಾಣದಂತಾಗಿದೆ. ಮಳೆಗಾಲದಲ್ಲಿ ಮಳೆ ನೀರು ಹರಿಯುವುದಕ್ಕೆ ಅಡಚಣೆಯಾಗಲಿದೆ. ಕಟಾವು ಮಾಡಿದ ಮರದ ಗೆಲ್ಲುಗಳನ್ನು ರಸ್ತೆ ಬದಿ, ಚರಂಡಿ ಮೇಲೆ ಎಸೆದಿರುವುದರಿಂದ ಮೂಡುಬಿದಿರೆ ಮೆಸ್ಕಾಂ ವಿರುದ್ಧ ಪರಿಸರ ಮಾಲಿನ್ಯದ ಆರೋಪ ಕೇಳಿಬಂದಿದೆ.