ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ವೈವಿಧ್ಯಕ್ಕೆ ಧಾನ್ಯಗಳ ‘ಸಿರಿ’

Published 4 ಜನವರಿ 2024, 4:46 IST
Last Updated 4 ಜನವರಿ 2024, 4:46 IST
ಅಕ್ಷರ ಗಾತ್ರ

ಮಂಗಳೂರು: ದೇಹಕ್ಕೆ ಸೂಕ್ಷ್ಮ ಪೋಷಕಾಂಶಗಳು ಸಿಗಬೇಕಾದರೆ ಆಹಾರದಲ್ಲಿ ವೈವಿಧ್ಯತೆ ಇರಬೇಕು. ಅಕ್ಕಿ ಪದಾರ್ಥಗಳನ್ನೇ ಹೆಚ್ಚಾಗಿ ಬಳಸುವ ಕರಾವಳಿ ಭಾಗದಲ್ಲಿ ಸಿರಿಧಾನ್ಯಗಳನ್ನು ಬಳಸಿದರೆ ವೈವಿಧ್ಯತೆ ಮೂಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ ಅಭಿಪ್ರಾಯಪಟ್ಟರು.

ಇದೇ 5ರಿಂದ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ನಡೆಯಲಿರುವ ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಅಂತರರಾಷ್ಟ್ರೀಯ ವ್ಯಾಪಾರ ಮೇಳದ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕರಾವಳಿ ಭಾಗದಲ್ಲಿ ಸಿರಿಧಾನ್ಯಗಳನ್ನು ಬೆಳೆಯವುದಿಲ್ಲ. ಆದ್ದರಿಂದ ಇಲ್ಲಿ ಅವುಗಳ ಬಳಕೆ ಕಡಿಮೆ. ಸಿರಿಧಾನ್ಯಗಳು ಸಮತೋಲಿತ ಆಹಾರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಸಿರಿಧಾನ್ಯಗಳಲ್ಲಿ ಹೆಚ್ಚು ಫೈಬರ್ ಅಂಶ ಇರುವುದು ಅಧ್ಯಯನದಲ್ಲಿ ತಿಳಿದು ಬಂದಿದ್ದು. ಅವುಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಅಂಶದ ಏರಿಕೆ ನಿಧಾನವಾಗಿರುತ್ತದೆ. ಇದು ಮಧುಮೇಹ ಇರುವವರಿಗೆ ಅನುಕೂಲ. ಸಿರಿಧಾನ್ಯಗಳು ಒತ್ತಡದಿಂದ ಆಗುವಂಥ ಸಮಸ್ಯೆಗಳ ಪರಿಹಾರಕ್ಕೂ ನೆರವಾಗುತ್ತವೆ ಎಂದು ಅವರು ಹೇಳಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ಬಯಲುಸೀಮೆಯ ಒಟ್ಟು ಕೃಷಿ ಪ್ರದೇಶದ ಶೇಕಡ 20ರಷ್ಟು ಭಾಗದಲ್ಲಿ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಆದರೆ ಈಚಿನ 2 ದಶಕಗಳಿಂದ ಸಿರಿಧಾನ್ಯಗಳ ಬೆಳೆ ಮತ್ತು ಬಳಕೆ ಕಡಿಮೆಯಾಗಿದೆ.  ಈಗ ಸಿರಿಧಾನ್ಯವನ್ನು ವಿಶ್ವಮಟ್ಟಕ್ಕೆ ಬೆಳೆಸುವ ಪ್ರಯತ್ನ ನಡೆಯುತ್ತಿದೆ.‌ ಕೃಷಿ ಇಲಾಖೆ 2017ರಿಂದಲೇ ಈ ಧಾನ್ಯಗಳ ಪ್ರಚಾರಕ್ಕೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ ಎಂದರು.

ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಮೀನುಗಾರಿಕಾ ಕಾಲೇಜು ನಿವೃತ್ತ ಪ್ರಾಧ್ಯಾಪಕ ಎ.ಎ.ಫಜಲ್,
ಸಿರಿಧಾನ್ಯ ಪ್ರೋತ್ಸಾಹಕ ರಾಧಾಕೃಷ್ಣ, ಕೃಷಿ ಇಲಾಖೆ ಪುತ್ತೂರು ವಿಭಾಗದ ಉಪನಿರ್ದೇಶಕ ಶಿವಶಂಕರ್‌, ಸಹಾಯಕ ನಿರ್ದೇಶಕಿ ವೀಣಾ ಮತ್ತಿತರರು ಇದ್ದರು.

ಸಿರಿಧಾನ್ಯ ನಡಿಗೆ

ಮಳೆಯಿಂದ ತಂಪಾಗಿದ್ದ ವಾತಾವರಣದಲ್ಲಿ ಬೆಳಿಗ್ಗೆ ಸಿರಿಧಾನ್ಯ ನಡಿಗೆ ನಡೆಯಿತು.
ಪುರಭವನದಿಂದ ಮಂಗಳಾ ಕ್ರೀಡಾಂಗಣದ ವರೆಗೆ ಹೆಜ್ಜೆ ಹಾಕಿದ 350ಕ್ಕೂ ಹೆಚ್ಚು ಮಂದಿ ಸಿರಿಧಾನ್ಯಗಳ ಉಪಯೋಗದ ಕುರಿತು ಮಾಹಿತಿ ನೀಡುವ ಘೋಷಣೆಗಳನ್ನು ಒಳಗೊಂಡ ಫಲಕಗಳನ್ನು ಹಿಡಿದುಕೊಂಡಿದ್ದರು. ಅವರೆಲ್ಲರೂ ಸಿರಿಧಾನ್ಯದ ಪ್ರಚಾರಕ್ಕೆ ಸಂಬಂಧಿಸಿದ ಟಿ ಶರ್ಟ್ ಮತ್ತು ಕ್ಯಾಪ್ ಧರಿಸಿದ್ದರು.

ಶಾರದಾ ಯೋಗ, ನ್ಯಾಚುರೊಪಥಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಮಂಗಳಾ ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ನಡೆಯಿತು. ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಾರದಾ ಯೋಗ, ನ್ಯಾಚುರೊಪತಿ ಆಸ್ಪತ್ರೆ ಮತ್ತು ಸಂಶೋಧನಾ ಕೇ‌ಂದ್ರದ ವಿದ್ಯಾರ್ಥಿಗಳು ಮತ್ತು ವಿವಿಧ ತಾಲ್ಲೂಕುಗಳ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT