ಸುಬ್ರಹ್ಮಣ್ಯ– ಮಂಜೇಶ್ವರ ಅಂತರರಾಜ್ಯ ರಸ್ತೆಯ ಬೆದ್ರಾಳ ಸೇತುವೆ ಬಳಿ ದುರ್ನಾತ ಬೀರುವ ತ್ಯಾಜ್ಯ ತುಂಬಿಕೊಂಡು ಕೊಳಕು ವಾತಾವರಣ ನಿರ್ಮಾವಾಗಿತ್ತು. ಸೇತುವೆಯ ಎರಡೂ ಕಡೆಗಳಲ್ಲಿ ಕೋಳಿ, ಹಸಿಮೀನು ತ್ಯಾಜ್ಯಗಳು, ತರಕಾರಿ ತ್ಯಾಜ್ಯಗಳು, ಪ್ಲಾಸ್ಟಿಕ್, ನಿರುಪಯುಕ್ತ ಆಹಾರ ಪದಾರ್ಥಗಳು ಕೊಳೆತು ದುರ್ನಾತ ಬೀರುತ್ತಿತ್ತು. ಇದು ಈ ಪರಿಸರದ ನಿವಾಸಿಗಳ ನೆಮ್ಮದಿ ಕೆಡಿಸುತ್ತಿತ್ತು. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಲ್ಲದೆ, ತ್ಯಾಜ್ಯ ತಿನ್ನಲು ಬರುವ ಬೀದಿನಾಯಿಗಳ ಉಪಟಳದಿಂದಾಗಿ ಪರಿಸರದ ಮಂದಿ ಆತಂಕ ಪಡುವಂತಾಗಿತ್ತು.