ಬಂಟ್ವಾಳ: ಕಾರ್ಪೊರೇಟ್ ಮತ್ತು ಎಲೆಕ್ಟ್ರಾನಿಕ್ ಯುಗದಲ್ಲಿ ಯಕ್ಷಗಾನ ಕಲೆಗೆ ಹಿರಿಯ ಕವಿ ಡಾ.ಶಿವರಾಮ ಕಾರಂತರ ಕನಸಿನಂತೆ ‘ಜಾಗತಿಕ ಮನ್ನಣೆ’ ಸಿಗಲು ಪ್ರಯತ್ನ ಮುಂದುವರಿಬೇಕು ಎಂದು ಹಿರಿಯ ವಿದ್ವಾಂಸ, ಅರ್ಥಧಾರಿ ಡಾ. ಎಂ.ಪ್ರಭಾಕರ ಜೋಶಿ ಹೇಳಿದರು.
ಇಲ್ಲಿನ ಬಿ.ಸಿ.ರೋಡು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ‘ಕನ್ನಡ ಕಲ್ಲಣ ನೀರ್ಪಾಜೆ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಶಾಲೆ ಉಳಿಯದೆ ಯಕ್ಷಗಾನಕ್ಕೆ ಕೂಡ ಉಳಿಗಾಲ ಇಲ್ಲ ಎಂದು ಎಚ್ಚರಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥಧಾರಿ ಜಬ್ಬಾರ್ ಸಮೊ ಸಂಪಾಜೆ ಮತ್ತು ಹಿರಿಯ ಅರ್ಥಧಾರಿ ಉಜಿರೆ ಅಶೋಕ್ ಭಟ್ ಅಭಿನಂದನಾ ಭಾಷಣ ಮಾಡಿದರು. ಹಿರಿಯ ಕವಿ ಸುಬ್ರಾಯ ಭಟ್ ನೆಕ್ಕರೆಕಳೆಯ ನೀರ್ಪಾಜೆ ಸಂಸ್ಮರಣೆ ಮಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಅಜಕ್ಕಳ ಗಿರೀಶ ಭಟ್ ಶುಭ ಹಾರೈಸಿದರು.
ಇದೇ ವೇಳೆ ಎಂ. ಗೋಪಾಲಕೃಷ್ಣ ಭಟ್ಟರ ಕೃತಿ ಮತ್ತು ರೇಷ್ಮಾ ಭಟ್ ಅವರ ಕಥಾಸಂಕಲನ ಬಿಡುಗಡೆಗೊಂಡಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ನೀರ್ಪಾಜೆ ಭೀಮ ಭಟ್ಟರ ಪತ್ನಿ ಶಂಕರಿ ಬಿ. ಭಟ್, ಸುಜೇತಾ ಪಿ.ಜೋಷಿ, ಕಾವೇರಿ ಜಿ. ಭಟ್, ಮುಳಿಯ ರಾಘವಯ್ಯ, ಸುಭಾಷಿಣಿ ಇದ್ದರು.
ನೀರ್ಪಾಜೆ ಅಭಿಮಾನಿ ಬಳಗ ಅಧ್ಯಕ್ಷ ಸುದರ್ಶನ ಜೈನ್ ಸ್ವಾಗತಿಸಿದರು. ಬಂಟ್ವಾಳ ಕಸಾಪ ಘಟಕದ ಅಧ್ಯಕ್ಷ ಕೆ.ಮೋಹನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ ಹೊಳ್ಳ ಮೊಡಂಕಾಪು ಪ್ರಾರ್ಥಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಡಾ.ನಾಗವೇಣಿ ಮಂಚಿ ಮತ್ತು ರಮಾನಂದ ನೂಜಿಪ್ಪಾಡಿ, ವಿ.ಸು. ಭಟ್ ಕಾರ್ಯಕ್ರಮ ನಿರೂಪಿಸಿದರು.