ಮಂಗಳೂರು: ‘ಕಸ ಸಾಗಣೆ ವಾಹನ ಚಾಲಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಸಫಾಯಿ ಕರ್ಮಾಚಾರಿಗಳ ಸಂಘವು ಫೆ.1ರಿಂದ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ನಮ್ಮ ಬೆಂಬಲವಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ತಿಳಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಂಗಳವಾರ ಮಾತನಾಡಿದ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ‘ನಮ್ಮ ಸಂಘದ ನೇತೃತ್ವದಲ್ಲಿ 2022ರ ಜೂನ್ನಲ್ಲಿ ನಡೆದಿದ್ದ ಪ್ರತಿಭಟನೆಗೆ ಮಣಿದ ಸರ್ಕಾರ ಪಾಲಿಕೆಯ ನೌಕರರನ್ನು ಕಾಯಂಗೊಳಿಸಲು ಹಾಗೂ ಅವರನ್ನು ವೇತನ ನೇರ ಪಾವತಿ ವ್ಯವಸ್ಥೆಯಡಿ ತರಲು ಕ್ರಮ ಕೈಗೊಂಡಿದೆ. ಮುಂದಿನ ಹಂತದಲ್ಲಿ ವಾಹನ ಚಾಲಕರನ್ನೂ ಕಾಯಂಗೊಳಿಸುವ ಭರವಸೆ ನೀಡಿದೆ.’ ಎಂದರು.
‘ಜಿಲ್ಲೆಯಲ್ಲಿ 578 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, 670 ಮಂದಿಯನ್ನು ವೇತನ ನೇರ ಪಾವತಿ ವ್ಯವಸ್ಥೆಯಡಿ ತರಲಾಗುತ್ತಿದೆ. ಪೌರಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಪ್ರತಿಭಟನೆ ನಡೆಸುವುದು ಸರಿಯಲ್ಲ. ಇದರಿಂದ ಈ ಪ್ರಕ್ರಿಯೆಗೆ ಹಿನ್ನಡೆಯಾಗಲಿದೆ. ಹಾಗಾಗಿ ಪೌರಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಬಾರದು’ ಎಂದು ಅವರು ಕೋರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಆನಂದ, ಮುಖಂಡರಾದ ನಾಗೇಶ್ ಕಾರ್ಸ್ಟ್ರೀಟ್, ಸುರೇಶ್ ಗಾಂಧಿನಗರ, ಸಂಜೀವ ಮಂಕಿ ಸ್ಟ್ಯಾಂಡ್ ಸುದ್ದಿಗೋಷ್ಠಿಯಲ್ಲಿ ಇದ್ದರು.