ಮಂಗಳೂರು: 'ಪಿಎಂ ವಿಶ್ವಕರ್ಮ ಯೋಜನೆಯಡಿ ವಿಶ್ವಕರ್ಮರು, ಮಡಿವಾಳರು, ಕ್ಷೌರಿಕರು ಸೇರಿದಂತೆ ಕುಲಕಸುಬು ನೆಚ್ಚಿಕೊಂಡಿರುವ 50 ಹಿಂದುಳಿದ ಸಮಾಜಗಳಿಗೆ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಒದಗಿಸಿದೆ. ಮೊಗವೀರರಿಗೆ ಮತ್ಸ್ಯ ಸಂಪದ ಯೋಜನೆಯಡಿ ಪ್ರಯೋಜನ ಸಿಕ್ಕಿದೆ’ ಎಂದು ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಚುನಾವಣಾ ಪ್ರಭಾರಿ ರವಿಶಂಕರ ಮಿಜಾರ್ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಿ.ಎಂ.ವಿಶ್ವಕರ್ಮ ಯೋಜನೆಯಿಂದ ಇದುವರೆಗೆ ಯಾವ ಫಲಾನುಭವಿಗೂ ಸಾಲ ಸಿಕ್ಕಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಇದರ ಪ್ರಯೋಜನ ಸಿಕ್ಕಿದೆ ಎಂಬ ಮಾಹಿತಿ ಇಲ್ಲ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಳಿಕ ಪಕ್ಷದ ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬ ಧ್ಯೇಯವಾಕ್ಯದ ಮೂಲಕ ಪ್ರಧಾನಿಯವರು ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ದಿದ್ದಾರೆ’ ಎಂದರು.
'2047ರ ವೇಳೆಗೆ ಭಾರತವನ್ನು ಜಗತ್ತಿನ ನಂ. 1 ರಾಷ್ಟ್ರವಾಗಿ ರೂಪಿಸುವ ಅಮೃತ ಕಾಲದಲ್ಲಿ ನಡೆಯುವ ಈ ಚುನಾವಣೆ ಅತ್ಯಂತ ಮಹತ್ವದ್ದು. ದೇಶ ಕಟ್ಟುವ ಸಲುವಾಗಿ ದಕ್ಷಿಣ ಕನ್ನಡದಲ್ಲಿ ಕ್ಯಾ. ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಗೆಲ್ಲಿಸಬೇಕು’ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ಪ್ರಮುಖ್ ಎಸ್.ಆರ್ ಹರೀಶ್ ಆಚಾರ್ಯ, ಮುಖಂಡರಾದ ನಾರಾಯಣ ಗಟ್ಟಿ, ಸೀತಾರಾಮ ಬಂಗೇರ, ಬಾಬು ಬಂಗೇರ ಉಳ್ಳಾಲ, ರುಕ್ಮಯ ನಾಯಕ್, ಸಂಜೀವ ಅಡ್ಯಾರ್ ಹಾಗೂ ಮಾಧ್ಯಮ ಸಹ ಸಂಚಾಲಕ ಮನೋಹರ ಶೆಟ್ಟಿ ಕದ್ರಿ ಭಾಗವಹಿಸಿದ್ದರು.