ಪುತ್ತೂರು: ದೇವಸ್ಥಾನದ ಜೀರ್ಣೋದ್ಧಾರದ ಮೂಲಕ ನಮ್ಮ ಆತ್ಮೋದ್ಧಾರದ ಕಾರ್ಯವಾಗುತ್ತಿದೆ. ಧಾರ್ಮಿಕ ಕೇಂದ್ರಗಳು ಶಿಕ್ಷಣ ನೀಡುವ ಕೇಂದ್ರವಾಗಬೇಕು. ಜನರಿಗೆ ಧರ್ಮ ಶಿಕ್ಷಣವನ್ನು ಧಾರ್ಮಿಕ ಕೇಂದ್ರಗಳಲ್ಲಿ ನೀಡಬೇಕಾದ ಆವಶ್ಯಕತೆ ಇದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮಿಜಿ ಹೇಳಿದರು.
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀವರ್ಚನ ನೀಡಿದರು.
‘ವಿಜ್ಞಾನದಲ್ಲಿ ಆವಿಷ್ಕಾರವಿದ್ದು, ಪರಿವರ್ತನೆಯೇ ವಿಜ್ಞಾನ. ಆದರೆ, ಆಧ್ಯಾತ್ಮದಲ್ಲಿ ಅವಿಷ್ಕಾರ ಇಲ್ಲ. ಯುವಕರ ಶಕ್ತಿಯಿಂದ ಜಗತ್ತನ್ನು ಬದಲಾಯಿಸಲು ಸಾಧ್ಯ’ ಎಂದು ಅವರು ಹೇಳಿದರು.
ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮಿಜಿ ಮಾತನಾಡಿ, ದೇವಸ್ಥಾನ, ಮಠ ಮಂದಿರಗಳ ಬ್ರಹ್ಮಕಲಶೋತ್ಸವಗಳು ನಡೆಯುತ್ತಿದೆ. ಕೋಟ್ಯಂತರ ಹಣ ಬಳಕೆಯಾಗುತ್ತಿದ್ದು, ಅದರ ಸದ್ಬಳಕೆಯ ಬಗ್ಗೆ ಯೋಚಿಸಬೇಕು. ದೇವಸ್ಥಾನ ಪೂಜೆಗೆ ಸೀಮಿತವಾಗಿರಬಾರದು, ಆಡಂಬರದಿಂದ ಭಕ್ತಿ ಪ್ರದರ್ಶನದ ಕೇಂದ್ರವಾಗಬಾರದು ಎಂದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಮಾತನಾಡಿದರು.
ಉಪನ್ಯಾಸಕ, ದೈವನರ್ತಕ ರವೀಶ್ ಪಡುಮಲೆ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಕೀಲ ಮೋಹನ್ ಗೌಡ ಇಡ್ಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಜೀವ ಪೂಜಾರಿ ಕೂರೇಲು ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ನೇಸರ ಕಂಪ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿದರು.