ಪುತ್ತೂರು: ‘ಸರ್ಕಾರವು ಅಲ್ಪ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ತಂತಿ ಮೇಲಿನ ನಡಿಗೆ ನನ್ನದು’ ಎಂಬ ಹೇಳಿಕೆ ನೀಡಿರಬಹುದು’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸೋಮವಾರ ಇಲ್ಲಿ ಸಮಜಾಯಿಷಿ ನೀಡಿದರು.
‘ವಿರೋಧ ಪಕ್ಷಗಳ ಒಟ್ಟು ಸದಸ್ಯರಿಗಿಂತ ಆಡಳಿತದಲ್ಲಿ ಕೇವಲ ನಾಲ್ಕು ಶಾಸಕರು ಮಾತ್ರ ಹೆಚ್ಚಿದ್ದಾರೆ. ಹೀಗಾಗಿ, ಅವರು ಹೇಳಿದ್ದಾರೆ. ಆದರೆ, ಮುಂದಿನ ಮೂರು ಮುಕ್ಕಾಲು ವರ್ಷಗಳೂ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿಗಳು ಕೇಂದ್ರದ ವರಿಷ್ಠರ ಜೊತೆ ಚರ್ಚೆ ನಡೆಸುತ್ತಾರೆ. 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ನಿಶ್ಚಿತ’ ಎಂದು ಭವಿಷ್ಯ ನುಡಿದರು.
‘ಸಾಮಾನ್ಯ ವರ್ಗದವರು ಆಡಳಿತಾತ್ಮಕ ಸೇವೆ (ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳು)ಗೆ ಸೇರಲು ಪಡೆಯುವ ತರಬೇತಿಯ ವೆಚ್ಚವನ್ನು ಸರ್ಕಾರದಿಂದ ಭರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.