ಮಂಗಳೂರು: ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು, ಅಧ್ಯಾಪಕರಿಗೆ ನೀಡುವಂತೆ ಖಾಸಗಿ ಸಂಸ್ಥೆಗಳಲ್ಲೂ ಸ್ಥಿರ ವೇತನ ನೀಡುವ ವ್ಯವಸ್ಥೆ ಆಗಬೇಕು ಎಂದು ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭಾಸ್ಕರ್ ಶೆಟ್ಟಿ ಟಿ ಆಗ್ರಹಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ವಲಯದಲ್ಲಿ ವೇತನ ಆಯೋಗ ಇರುವಂತೆ ಖಾಸಗಿಯಲ್ಲೂ ವೇತನಕ್ಕೆ ಸಂಬಂಧಿಸಿ ನೀತಿ ರೂಪಿಸಲು ಸೂಕ್ತ ವ್ಯವಸ್ಥೆ ಬೇಕು. ಇಲ್ಲವಾದರೆ ಕಡಿಮೆ ವೇತನ ಇರುವಲ್ಲಿಂದ ಹೆಚ್ಚು ವೇತನ ನೀಡುವ ಕಡೆಗೆ ನಿರಂತರವಾಗಿ ಶಿಕ್ಷಕರು ಹೋಗುತ್ತಿರುತ್ತಾರೆ. ಇದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದರು.
ಸರ್ಕಾರಿ ಶಾಲೆಗಳ ಶಿಕ್ಷಕರ ವೃತ್ತಿ ಅತ್ಯಂಕ ಕ್ಲಿಷ್ಟಕರವಾಗಿದೆ. ಮೂರು ಪರೀಕ್ಷೆ, ಪಠ್ಯದ ಗೊಂದಲ ಮತ್ತಿತರ ಸಮಸ್ಯೆಗಳಿಂದಾಗಿ ಅವರಿಗೆ ರಜಾ ಸೌಲಭ್ಯ ಇಲ್ಲದಂತಾಗಿದೆ ಎಂದು ಅವರು ದೂರಿದರು.
ವಿಧಾನಸಭಾ ಚುನಾವಣೆಯ ಮತಪಟ್ಟಿಯಲ್ಲಿ ಮತದಾರರು ಪ್ರತಿ ಬಾರಿ ಹೆಸರು ನೊಂದಾಯಿಸಿಕೊಳ್ಳಬೇಕಾದ ಕಾರಣ ಅನೇಕರು ಮತದಾನದಿಂದ ವಂಚಿತರಾಗುವಂತಾಗಿದೆ. ಇದನ್ನು ತಡೆಯಲು ಒಂದು ಬಾರಿ ಮತದಾರರ ಚೀಟಿ ಕೊಡುವ ವ್ಯವಸ್ಥೆ ಆಗಬೇಕು. ಈ ಬಾರಿ ಅನೇಕ ಮಂದಿ ಮತದಾನದಿಂದ ವಂಚಿತರಾಗಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು ಹೈಕೋರ್ಟ್ ಮೊರೆ ಹೋಗುವುದಕ್ಕೂ ಮುಂದಾಗಿರುವುದಾಗಿ ಅವರು ತಿಳಿಸಿದರು.
ವಸಂತರಾಜ್ ಶೆಟ್ಟ, ಮಂಜುನಾಥ್, ಪ್ರೊ.ಸುಬ್ಬಣ್ಣ ಶೆಟ್ಟಿ, ರತ್ನಾಕರ ಶೆಟ್ಟಿ ಮತ್ತು ರಮೇಶ್ ಕೋಟ್ಯಾನ್ ಇದ್ದರು.