ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ನಡೆಯುತ್ತಿರುವ ಸಮಾವೇಶಕ್ಕೆ ಹೊರರಾಜ್ಯದವರಿಗೆ ನಿಷೇಧ ಹೇರಲಾಗಿದೆ.
ಗಡಿಭಾಗದಲ್ಲಿ ಇದಕ್ಕಾಗಿ ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿಯೊಬ್ಬರನ್ನು ಪರಿಶೀಲನೆ ಮಾಡಿ ಜಿಲ್ಲೆಗೆ ಪ್ರವೇಶ ಅವಕಾಶ ನೀಡಲಾಗುತ್ತಿದೆ. ಪೊಲೀಸರ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಕೇರಳ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಒಟ್ಟು 33ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಬೃಹತ್ ಸಮಾವೇಶದ ಮೇಲೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಪೊಲೀಸ್ ಇಲಾಖೆ ಮಂಗಳೂರಿನ ಹಲವೆಡೆಗೆ ಬಿಗಿ ಭದ್ರತೆಯನ್ನು ನಿಯೋಜಿಸಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 10ವರೆಗೆ ಮಂಗಳೂರು-ಬೆಂಗಳೂರು ಹೆದ್ದಾರಿ ಸಂಚಾರವನ್ನೂ ಮಾರ್ಪಾಡು ಮಾಡಲಾಗಿದೆ.
ದೋಣಿ ಮೂಲಕ ಬಂದ ಜನರು: ಸಮಾವೇಶಕ್ಕೆ ಉಳ್ಳಾಲದ ಕೋಟೇಪುರದಿಂದ ಅಡ್ಯಾರ್ ಕಣ್ಣೂರುವರೆಗೆ ನದಿಯಲ್ಲಿ 100 ದೋಣಿಯಲ್ಲಿ ಬೃಹತ್ ರ್ಯಾಲಿ ಮೂಲಕ ಜನರು ಬಂದಿದ್ದಾರೆ.
ಈ ಮೈದಾನ ನೇತ್ರಾವತಿ ನದಿ ನದಿ ತೀರದಲ್ಲಿ ಇರುವುದರಿಂದ ದೋಣಿ ಮೂಲಕ ರ್ಯಾಲಿ ನಡೆಸಿ, ಸಮಾವೇಶದಲ್ಲಿ ಜನ ಭಾಗವಹಿಸಿದ್ದಾರೆ. ಕೈಯಲ್ಲಿ ರಾಷ್ಟ್ರಧ್ವಜಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ದೋಣಿಗೆ ಹುಟ್ಟು ಹಾಕುವ ಮೂಲಕ ಸಾವಿರಾರು ಜನ ದೋಣಿಯಲ್ಲಿ ಬಂದರು.