ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಶುಕ್ರವಾರ ಮಳೆಯಾಗಿದೆ. ಮುಂಜಾನೆ 6 ಗಂಟೆಯ ವೇಳೆ ಗುಡುಗಿನಿಂದೊಡಗೂಡಿದ ಮಳೆ ಆರಂಭವಾಗಿದೆ. ಮಂಗಳೂರು ನಗರ ಸೇರಿದಂತೆ ಅನೇಕ ಭಾಗಗಳಲ್ಲಿ ತುಂತುರು ಹನಿ ಬಿದ್ದಿದ್ದು ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರು ತಾಲ್ಲೂಕುಗಳ ಕೆಲವೆಡೆ ಜೋರು ಮಳೆಯಾಗಿದೆ. ಜಿಲ್ಲೆಯಾದ್ಯಂತ ಒಮ್ಮೆ ಬಿಸಿಲು ಮತ್ತೊಮ್ಮೆ ಮೋಡ ಕವಿದ ವಾತಾವರಣ ಇತ್ತು.
ಉಳ್ಳಾಲ ತಾಲ್ಲೂಕಿನ ವ್ಯಾಪ್ತಿಯ ತಲಪಾಡಿ, ಕೋಟೆಕಾರು, ಬೀರಿ, ದೇರಳಕಟ್ಟೆ, ಕುತ್ತಾರು, ತೊಕ್ಕೊಟ್ಟು ಭಾಗದಲ್ಲಿ ಮಳೆಯಾಗಿದೆ. ಮೂಲ್ಕಿ ತಾಲ್ಲೂಕಿನ ಹಳೆಯಂಗಡಿ, ಕಾರ್ನಾಡು, ಬಪ್ಪನಾಡು ಭಾಗಗಳಲ್ಲಿ ತಂತುರು ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ನಾರಾವಿ, ಮರೋಡಿಯಲ್ಲಿ ಸಾಧಾರಣ ಮಳೆ ಸುರಿದಿದೆ.
ಪುತ್ತೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ತಡರಾತ್ರಿ ಸಾಧಾರಣ, ಈಶ್ವರಮಂಗಲ ಸುತ್ತಮುತ್ತ ರಾತ್ರಿ ಮತ್ತು ಶುಕ್ರವಾರ ನಸುಕಿನಲ್ಲಿ ಬಿರುಸಿನ ಮಳೆಯಾಗಿದೆ.
ಹಲವು ಕಡೆಗಳಲ್ಲಿ ಮನೆಯಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಒದ್ದೆಯಾಗಿದೆ. ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದ ಮಳೆ ತಂಪೆರೆದಿದೆ.