ಮಂಗಳೂರು: ಇಲ್ಲಿನ ಬಳ್ಳಾಲ್ಬಾಗ್ ನಿವಾಸಿ ರಜನಿ ಶೆಟ್ಟಿ ಅವರು 30 ಅಡಿ ಆಳದ ಬಾವಿಗೆ ಇಳಿದು, ಜೀವದ ಹಂಗನ್ನು ತೊರೆದು ಬೆಕ್ಕನ್ನು ರಕ್ಷಿಸಿದ್ದಾರೆ.
ನಗರದ ದೇರೇಬೈಲ್ ಕೊಂಚಾಡಿಯಲ್ಲಿ 30 ಅಡಿ ಆಳದ ಹಳೆಯ ಬಾವಿ ಬಹುತೇಕ ಕುಸಿದು ಗುಹೆಯಂತಾಗಿದ್ದು, ಈ ಬಾವಿಗೆ ಈಚೆಗೆ ಬೆಕ್ಕೊಂದು ಬಿದ್ದು ಬಾವಿಯ ಮಧ್ಯದಲ್ಲಿ ಕುಸಿದು ಉಂಟಾದ ತಡೆಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಒಂದು ದಿನವಿಡೀ ಆಹಾರವಿಲ್ಲದೆ ಬಾವಿಯಲ್ಲೇ ಉಳಿದಿತ್ತು.
ಬೆಕ್ಕಿನ ರಕ್ಷಣೆ ಮಾಡಲು ಯಾರಿಂದಲೂ ಸಾಧ್ಯವಾಗದಿದ್ದಾಗ ರಜನಿ ಶೆಟ್ಟಿ ಅವರನ್ನು ಸ್ಥಳೀಯರು ಸಂಪರ್ಕಿಸಿದ್ದರು. ಪ್ರಾಣಿ ಪ್ರೇಮಿಯಾದ ರಜನಿ ಶೆಟ್ಟಿ ಅವರು ಸ್ಥಳೀಯರ ಸಹಕಾರದಿಂದ ಹಗ್ಗದ ಸಹಾಯದೊಂದಿಗೆ ಬಾವಿಗೆ ಇಳಿದು ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಹಿಂದೆಯೂ ಇವರು ಬಾವಿಗೆ ಬಿದ್ದಿದ್ದ ನಾಯಿಯೊಂದನ್ನು ರಕ್ಷಿಸಿದ್ದ ವಿಡಿಯೊ ವೈರಲ್ ಆಗಿತ್ತು.