ಪಡುಬಿದ್ರಿ: ಭಾರತದ ಸೇರಿದಂತೆ 20 ದೇಶಗಳಿಂದ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ನಾಗರಿಕರಿಗೆ ಸೌದಿ ಅರೇಬಿಯಾ ನಿಷೇಧ ಹೇರಿದ್ದು, ಇದರಿಂದ ದುಬೈಯಲ್ಲಿ ಸೌದಿಗೆ ತೆರಳುವವರು ಆತಂಕಿತರಾಗಿದ್ದಾರೆ.
ಈ ಬಗ್ಗೆ ಸೌದಿಯಲ್ಲಿ ನೆಲೆಸಿರುವ ಪಡುಬಿದ್ರಿ ನಿವಾಸಿ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಪಿ.ಎ. ಹಮೀದ್ ಪಡುಬಿದ್ರಿ, ಈ ಆದೇಶದಿಂದ ದುಬೈಯಲ್ಲಿ ನೆಲೆಸಿರುವ ಸಮಸ್ಯೆಯಾಗಲಿದ್ದು, ಭಾರತೀಯ ರಾಯಭಾರಿ ಕಚೇರಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್-19 ಬಳಿಕ ಸೌದಿ ಅರೇಬಿಯಾವು ಭಾರತ ಸಹಿತ ಕೆಲವು ದೇಶಗಳಿಗೆ ನೇರ ಸೌದಿ ಪ್ರವೇಶಿಸಲು ನಿರ್ಬಂಧ ವಿಧಿಸಿತ್ತು. ಇದರಿಂದ ಸೌದಿಗೆ ತೆರಳುವವರು ದುಬೈಗೆ ತೆರಳಿ ಅಲ್ಲಿ 14 ದಿನಗಳ ಕಾಲ ವಾಸ್ತವ್ಯ ಹೂಡಿ ಬಳಿಕ ಸೌದಿಗೆ ತೆರಳಬೇಕಾಗಿತ್ತು. ಆದರೆ ಬುಧವಾರದಿಂದ ಭಾರತ ಸಹಿತ 20 ದೇಶಗಳಿಂದ ಬರುವ ನಾಗರಿಕರಿಗೆ ಸೌದಿ ಪ್ರವೇಶಿಸಲು ತಾತ್ಕಾಲಿಕ ನಿಷೇಧ ಹೇರಿ ಮಂಗಳವಾರ ಆದೇಶ ಹೊರಡಿಸಿದೆ.
ಈ ಆದೇಶದಿಂದ ದುಬೈಯಲ್ಲಿ ಸೌದಿಗೆ ತೆರಳಲು ನೆಲಸಿರುವ ಭಾರತೀಯರು ಆತಂಕಿತರಾಗಿದ್ದಾರೆ. ಅಲ್ಲಿ ನೆಲೆಸಿರುವವರಲ್ಲಿ ಉದ್ಯಮಿಗಳು, ಕಾರ್ಮಿಕರು, ಕುಟುಂಬಗಳು, ಮಕ್ಕಳು ಇದ್ದಾರೆ. ಏಕಾಏಕಿ ಈ ನಿಯಮಗಳಿಂದ ಅವರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಲಿದೆ.
ಆದೂದರಿಂದ ಸೌದಿ ಸರ್ಕಾರದೊಂಇಗೆ ರಾಜತಾಂತ್ರಿಕ ಚರ್ಚೆಯನ್ನು ನಡೆಸಲು ಮತ್ತು ಮಾನವೀಯ ನೆಲೆಯಲ್ಲಿ ಅವರ ಪರಿಸ್ಥಿತಿಯನ್ನು ಪರಿಶೀಲಿಸಲು ಅಲ್ಲದೆ ದುಬೈಯಿಂದ ಸೌದಿಗೆ ಅವರ ಪ್ರವೇಶಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಭಾರತೀಯ ರಾಯಭಾರಿ ಕಚೇರಿಯ ರಾಯಭಾರಿ ಡಾ. ಯೂಸುಫ್ ಸಯೀದ್ ಅವರನ್ನು ಆಗ್ರಹಿಸಿದ್ದಾರೆ.