ಬದಿಯಡ್ಕ: ಮುಳ್ಳೇರಿಯ ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯ 1989ರಿಂದ 2023ರ ವರೆಗಿನ ಸುಮಾರು 1,000 ವಿದ್ಯಾರ್ಥಿಗಳು ಒಗ್ಗೂಡಿ, ಶಾಲೆಗೆ ಅಗತ್ಯವಿರುವ ಸಿಸಿಟಿವಿ ಕ್ಯಾಮೆರಾ, ಎಲ್ಲ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ, ಕಲಿಕಾ ಸಾಮಗ್ರಿಗಳ ವಿತರಣೆ, ವೈದ್ಯಕೀಯ ಸಹಾಯ ನೀಡಲು ನಿರ್ಧರಿಸಿದ್ದಾರೆ.
ಬೀಮ್ಸ್ ಅಫ್ ವಿಎಚ್ಎಸ್ಇ ಸಂಘಟನೆಯ ಮೂಲಕ ಮಕ್ಕಳಿಗೆ ಮಾಹಿತಿ ಕಾರ್ಯಾಗಾರ, ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು. ಈ ಯೋಜನೆಯನ್ನು ಸಿನಿಮಾ ನಟ ಉಣ್ಣಿರಾಜ ಚೆರುವತ್ತೂರು ಉದ್ಘಾಟಿಸಿದರು.
ಪಯ್ಯನ್ನೂರಿನ ವೊಕೇಶನಲ್ ಹೈಯರ್ ಸೆಕೆಂಡರಿ ಪ್ರಾದೇಶಿಕ ಸಹಾಯಕ ನಿರ್ದೇಶಕಿ ಉದಯ ಕುಮಾರಿ, ವಿಎಚ್ಎಸ್ಇ ಪ್ರಾಂಶುಪಾಲ ಕೆ. ರಿಯಾಜ್, ಪಿಟಿಎ ಅಧ್ಯಕ್ಷ ಎಂ.ಪದ್ಮನಾಭನ್, ಮುಖ್ಯ ಶಿಕ್ಷಕ ಶಾಹುಲ್ ಹಮೀದ್, ಮೊಹಮ್ಮದ್ ನೌಫಲ್, ಎಂ.ಮೌನೇಶ್, ಶಂಸುದ್ದೀನ್ ಅಡೂರು ಉಪಸ್ಥಿತರಿದ್ದರು.
ಚಿಕಿತ್ಸಾ ಸಮಿತಿ ಹಾಗೂ ಸುಭಿಕ್ಷಾ ಯೋಜನೆಗೆ ನೆರವು ಸ್ವೀಕರಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೌಫಲ್ ಸ್ವಾಗತಿಸಿದರು. ಮೌನೇಶ್ ವಂದಿಸಿದರು.