ಪುತ್ತೂರು: ಮುಳುಗು ಸೇತುವೆ ಎಂದೇ ಖ್ಯಾತಿ ಪಡೆದಿರುವ ಪುತ್ತೂರು- ಪರ್ಲಡ್ಕ- ಕುಂಜೂರುಪಂಜ- ಪಾಣಾಜೆ ರಸ್ತೆಯಲ್ಲಿ ಇರ್ದೆ ಗ್ರಾಮದ ಚೆಲ್ಯಡ್ಕದಲ್ಲಿರುವ ಸೇತುವೆ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವುದರಿಂದ ಗುರುವಾರ ಬೆಳಿಗ್ಗೆಯಿಂದಲೇ ಸೇತುವೆ ಮುಳುಗಡೆಯಾಗಿದೆ.
ಪುತ್ತೂರು- ಪರ್ಲಡ್ಕ- ಕುಂಜೂರುಪಂಜ ರಸ್ತೆಯಲ್ಲಿ ಖಾಸಗಿ ಬಸ್ ಓಡಾಟ ಮಾತ್ರ ಇದ್ದು, ಸೇತುವೆ ಮುಳುಗಡೆಯಾಗಿರುವುದರಿಂದ ಖಾಸಗಿ ಬಸ್ ಸಂಚಾರ ಸಂಚಾರ ಸ್ಥಗಿತಗೊಂಡಿದೆ. ದೈನಂದಿನ ಕಾರ್ಯಗಳಿಗೆ ಪೇಟೆಗೆ ತೆರಳುವ ಗುಮ್ಮಟೆಗದ್ದೆ, ಅಜ್ಜಿಕಲ್ಲು, ದೇವಸ್ಯ ಭಾಗದ ಜನ ಸಮಸ್ಯೆ ಅನುಭವಿಸುವಂತಾಗಿದೆ.
ಸೇತುವೆ ಮುಳುಗಡೆಯಾಗಿರುವುದರಿಂದ ಪುತ್ತೂರು- ಪರ್ಲಡ್ಕ- ಕುಂಜೂರುಪಂಜ ಪಾಣಾಜೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಗಳು ಪುತ್ತೂರಿನಿಂದ ಮಾಣಿ– ಮೈಸೂರು– ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಟ್ಯಾರು-ಕೈಕಾರ ರಸ್ತೆ ಮೂಲಕ ತೆರಳುತ್ತಿವೆ. ವಾಹನ ಸವಾರರೂ ಇದೇ ರಸ್ತೆ ಬಳಸಿಕೊಂಡು ಪ್ರಯಾಣಿಸುತ್ತಿದ್ದಾರೆ.
ಶಿಥಿಲ ಸೇತುವೆ:
ಚೆಲ್ಯಡ್ಕ ಮುಳುಗು ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಸೇತುವೆಯ ಕೆಲವು ಭಾಗದಲ್ಲಿ ಆಧಾರಸ್ತಂಭಕ್ಕೆ ಬಳಸಿದ ಕಲ್ಲುಗಳು, ಕಬ್ಬಿಣದ ರಾಡ್ಗಳು ಕಳಚಿಕೊಂಡಿವೆ. ಸೇತುವೆಯ ಕೆಳಭಾಗದಲ್ಲಿ ಎರಡೂ ಬದಿಯ ಮಣ್ಣು ಕೊಚ್ಚಿಕೊಂಡು ಹೋಗಿದೆ. ಹಳೆಯದಾದ ಈ ಸೇತುವೆ ಕುಸಿಯುವ ಅಪಾಯದಲ್ಲಿದ್ದು, ಅಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ಆಗ್ರಹಕ್ಕೆ ಸ್ಪಂದನೆ ಸಿಕ್ಕಿಲ್ಲ. ಕಳೆದ ಚೆಲ್ಯಡ್ಕ ಮುಳುಗು ಸೇತುವೆ ಕಳೆದ ಮಳೆಗಾಲದಲ್ಲಿ 5 ಬಾರಿ ಮುಳುಗಡೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.