ಮೂಡುಬಿದಿರೆ: ಸರ್ಕಾರಿ ಶಾಲೆಗಳನ್ನು ನಿರ್ಲಕ್ಷ್ಯ ಮಾಡದೆ ಅವುಗಳನ್ನು ಸದೃಢಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯೆ ಮಮತಾ ಆನಂದ್ ಹೇಳಿದರು.
ನಡ್ಯೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರ್ಪಾಡಿಯ ಮಕ್ಕಳಿಗೆ ಶುಕ್ರವಾರ ಸರ್ಕಾರ ನೀಡಿರುವ ಶಾಲಾ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ವರ್ಷವೂ ಮಕ್ಕಳನ್ನು ಕರೆತರಲು ಶಾಲಾ ಸಲಹಾ ಸಮಿತಿಯಿಂದ ಉಚಿತ ರಿಕ್ಷಾ ಸೌಲಭ್ಯ ಮುಂದುವರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಗಂಗಾಧರ ಬಂಗೇರ ಹೇಳಿದರು.
ಗೌರವ ಶಿಕ್ಷಕಿಯ ವೇತನವನ್ನು ಹಿರಿಯ ವಿದ್ಯಾರ್ಥಿಗಳ ಸಂಘ ನೀಡಲಿದೆ ಎಂದು ಸಂಘದ ಕಾರ್ಯದರ್ಶಿ ಯತೀಶ್ ಕೋಟ್ಯಾನ್ ತಿಳಿಸಿದರು.
ಮುಖ್ಯಶಿಕ್ಷಕಿ ಉಷಾಲತಾ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸವಿತಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಇದ್ದರು. ಅತಿಥಿ ಶಿಕ್ಷಕಿ ರಕ್ಷಾ ಸ್ವಾಗತಿಸಿದರು. ಗೌರವ ಶಿಕ್ಷಕಿ ಮಮತ ರಾಜೇಶ್ ವಂದಿಸಿದರು.