ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ಭಾವನೆಗೆ ಧಕ್ಕೆ: ಶರಣ್‌ ಪಂಪ್‌ವೆಲ್

ಕಸಾಯಿಖಾನೆ ಆಧುನೀಕರಣಕ್ಕೆ ಅನುದಾನ ವಿರೋಧಿಸಿ ಪ್ರತಿಭಟನೆ
Last Updated 12 ಅಕ್ಟೋಬರ್ 2018, 11:30 IST
ಅಕ್ಷರ ಗಾತ್ರ

ಮಂಗಳೂರು: ಕದ್ರೋಳಿಯ ಕಸಾಯಿಖಾನೆ ಆಧುನೀಕರಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹15 ಕೋಟಿ ನೀಡುವುದಾಗಿ ಹೇಳಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ಕ್ರಮವನ್ನು ಖಂಡಿಸಿ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಮಂಗಳೂರಿನ ಕಸಾಯಿಖಾನೆಯಲ್ಲಿ ಅಕ್ರಮವಾಗಿ ದನಗಳನ್ನು ವಧೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆಯಲ್ಲಿ ವಧೆ ಮಾಡಲಾಗುತ್ತದೆ. ಈಗ ಅದೇ ಕಸಾಯಿಖಾನೆಯ ಅಭಿವೃದ್ಧಿಗೆ ಸಚಿವ ಯು.ಟಿ. ಖಾದರ್ ₹15 ಕೋಟಿ ಅನುದಾನ ನೀಡಿದ್ದು ಅನುಮಾನ ಸೃಷ್ಟಿಸಿದೆ ಎಂದು ಹೇಳಿದರು.

ಒಂದೆಡೆ ಗೋಶಾಲೆಗಳಿಗೆ ಅನುದಾನ ಇನ್ನೂ ಮಂಜೂರಾಗಿಲ್ಲ. ಸರ್ಕಾರ ಮುಂದೆ ಕೈಯೊಡ್ಡುವ ಸ್ಥಿತಿ ಜಿಲ್ಲೆಯ ಕೆಲ ಗೋಶಾಲೆಗಳಿಗಿದೆ. ಈ ನಡುವೆ ಯು.ಟಿ. ಖಾದರ್ ಅವರು ಕಸಾಯಿಖಾನೆಗೆ ಅನುದಾನ ನೀಡಿ, ಹಿಂದೂಗಳ ಭಾವನೆಗಳಿಗೆ ನೋವು ಮಾಡಿದ್ದಾರೆ ಎಂದು ಆರೋಪಿಸಿದರು.

ಖಾದರ್ ಒಂದೇ ಕಸಾಯಿಖಾನೆಗೆ ₹15 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಜನರು ತಿನ್ನುವ ಆಹಾರ ಶುಚಿಯಾಗಿರಬೇಕೆಂದು ಹಣ ನೀಡಿರುವುದಾಗಿ ಸಚಿವರು ಹೇಳಿಕೆ ಹೇಳಿದ್ದಾರೆ. ಇದು ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದೆ ಎಂದು ತಿಳಿಸಿದರು.

ಉಳ್ಳಾಲದಲ್ಲಿಯೂ ಅನೇಕ ಕಸಾಯಿಖಾನೆಗಳಿದೆ. ಅಕ್ರಮ ಕಸಾಯಿಖಾನೆಗಳ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ. ಕೇವಲ ಅವರ ಸಮುದಾಯಕ್ಕೆ ಸಚಿವ ಖಾದರ್ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಹಿಂದೂಗಳ ಮತ್ತು ಹಿಂದೂ ಧರ್ಮದ ವಿರುದ್ಧ ಖಾದರ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಹಿಂದೂ ಭಾವನೆಗಳ ವಿರುದ್ಧ ಖಾದರ್ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ ಮಾತನಾಡಿ, ಸಚಿವ ಖಾದರ್ ಅವರ ಅಲ್ಪಸಂಖ್ಯಾತರ ಓಲೈಕೆ ನೀತಿ ಖಂಡನೀಯ. ಕರ್ನಾಟಕದಲ್ಲಿ ಸಂಫೂರ್ಣ ಗೋಹತ್ಯೆ ನಿಷೇಧವಿದ್ದರೂ, ಕುದ್ರೋಳಿ ಕಸಾಯಿಖಾನೆಗೆ ವಾಹನದ ಮೂಲಕ ಗೋವಧೆಗಾಗಿ ಗೋ ಸಾಗಣೆ ಮಾಡಿದ ಹಲವಾರು ಪ್ರಕರಣಗಳು ದಾಖಲಾಗಿದೆ. ಸಚಿವರು ಅಕ್ರಮ ಕಸಾಯಿಖಾನೆಗೆ ಕುಮ್ಮಕ್ಕು ನೀಡುವ ಮೂಲಕ ಇಲ್ಲಿ ಕೋಮುಗಲಭೆ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಹಿಂದೂಗಳ ಭಾವನೆ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಕಾರ್ಯಾಧ್ಯಕ್ಷ ಗೋಪಾಲ ಕುತ್ತಾರ್‌, ಜಿಲ್ಲಾ ಗೋರಕ್ಷಾ ಪ್ರಮುಖ ಪ್ರದೀಪ್‌ ಪಂಪ್‌ವೆಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT