ಉಜಿರೆ: ಪ್ರಶಾಂತವಾದ ಸುಂದರ ಪ್ರಾಕೃತಿಕ ವನಸಿರಿಯ ಮಧ್ಯೆ ಐತಿಹಾಸಿಕ ಜಮಲಾಬಾದ್ (ನರಸಿಂಹಗಡ) ನಿಂದ ಅನತಿ ದೂರದಲ್ಲಿರುವ ನಡ ಸರ್ಕಾರಿ ಪ್ರೌಢಶಾಲೆ ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮ ಸಡಗರದಲ್ಲಿದೆ.
1989ರ ಅಗೋಸ್ಟ್ 9 ರಂದು 18 ವಿದ್ಯಾರ್ಥಿಗಳೊಂದಿಗೆ ನಡ ಗ್ರಾಮದಲ್ಲಿ ಪ್ರಾರಂಭಗೊಂಡ ಈ ಶಾಲೆ ಜ್ಞಾನ ದಾಸೋಹದಲ್ಲಿ 25 ವರ್ಷಗಳ ಸೇವೆಯನ್ನು ಪೂರೈಸಿದ್ದು ಇದೇ 9ರಂದು ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದೆ.
ಶಾಸಕ ಕೆ.ವಸಂತ ಬಂಗೇರ ನೇತೃತ್ವದಲ್ಲಿ ಸ್ಥಳೀಯ ಮುಖಂಡರಾದ ಮಾಜಿ ಸಚಿವ ಕೆ. ಗಂಗಾಧರ ಗೌಡ, ಬಿ. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ನಡಗುತ್ತು ಧನಂಜಯ ಅಜ್ರಿ, ಸುರ್ಯಗುತ್ತು ಸುಭಾಶ್ಚಂದ್ರ ಮೊದಲಾದವರ ನೇತೃತ್ವದಲ್ಲಿ ಶಾಲೆಯು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಶಾಲೆಯಲ್ಲಿ ಏಳು ಮಂದಿ ಶಿಕ್ಷಕರಿದ್ದು 123 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಶರ್ಮಿಳಾ ಬಿ. ಮಾರ್ಗದರ್ಶನದಲ್ಲಿ ಶಿಕ್ಷಕರಾದ ಯಾಕೂಬ್ ಎಸ್, ಏಕನಾಥ ಗೌಡ, ಶೋಭಾ, ಮೋಹನ್ ಬಾಬು ಡಿ, ಶಿವಪುತ್ರ ಸುಣಗಾರ, ಸಾವಿತ್ರಿ ಸಿ.ಡಿ ಮತ್ತು ಜಾಹ್ನವಿ ಕೆ.ಎಸ್ ರಜತ ಮಹೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ವರ್ಷವಿಡೀ 25 ವಿಶೇಷ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಾಗಿದೆ. ಸ್ವಚ್ಛತಾ ಆಂದೋಲನ, ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾಕೂಟ, ಅಂಗವಿಕಲ ಮಕ್ಕಳಿಗೆ ಗುರುತಿನ ಚೀಟಿ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಮಾಡಲಾಗಿದೆ.
ಈ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಲವು ವರ್ಷಗಳಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ನಡದ ಶಾಲೆ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡಿದೆ.
ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಶಾಸಕರ ಅನುದಾನದಿಂದ ರಂಗ ಮಂದಿರ, ಶೌಚಾಲಯ ಕಟ್ಟಡ, ಆಟದ ಮೈದಾನ ವಿಸ್ತರಣೆ ಮೊದಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು ಇದೇ 9ರಂದು ಉದ್ಘಾಟನೆಗೊಳ್ಳಲಿವೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಗ್ಯಾಲರಿ ಹಾಗೂ ಶಾಲೆಗೆ ರಸ್ತೆಯ ಡಾಂಬರೀಕರಣ ಮಾಡಿದರೆ ತಾ.ಪಂ. ಅನುದಾನದಲ್ಲಿ ಮುಖ್ಯ ಪ್ರವೇಶ ದ್ವಾರ ನಿರ್ಮಿಸಲಾಗಿದೆ.
ಶಾಲೆಯ ಹಿರಿಯ ವಿದ್ಯಾರ್ಥಿಗಳ ದೇಣಿಗೆಯಿಂದ ₨15 ಲಕ್ಷ ವೆಚ್ಚದಲ್ಲಿ ನೂತನ ಗಣಿತ ಪ್ರಯೋಗಾಲಯವನ್ನು ರೂಪಿಸಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಇದೊಂದು ಪ್ರಥಮ ಮಾದರಿ ಪ್ರಯೋಗಾಲಯವಾಗಿದೆ ಎಂದು ಶಾಲೆಯ ಹಿರಿಯ ಗಣಿತ ಶಿಕ್ಷಕ ಯಾಕೂಬ್ ಎಸ್ ಹೇಳುತ್ತಾರೆ.
ಪ್ರಯೋಗಾಲಯದ ಹೊರ ಆವರಣದಲ್ಲಿಯೇ ಗಣಿತದ ವಿಸ್ಮಯ ಲೋಕ ನಮ್ಮನ್ನು ಸ್ವಾಗತಿಸುತ್ತದೆ. ವೃತ್ತ, ತ್ರಿಭುಜ, ಚತುರ್ಭುಜ, ಪಂಚಭುಜಾಕೃತಿ, ಷಡ್ಭುಜಾಕೃತಿ, ಸ್ಪರ್ಶಕ, ಸ್ವಾಭಾವಿಕ ಸಂಖ್ಯೆಗಳು, ಗಣಿತದ ಚಿಹ್ನೆಗಳು ಮತ್ತು ಸಂಕೇತಗಳು ನಮ್ಮಲ್ಲಿ ಕುತೂಹಲವನ್ನು ಮೂಡಿಸುತ್ತವೆ.
ಪ್ರಯೋಗಾಲಯ ಪ್ರವೇಶಿಸಿದಂತೆ ಸಿ.ವಿ ರಾಮನ್, ಆರ್ಯಭಟ, ಕೊಪರ್ನಿಕಸ್, ಪೈಥಾಗೊರಸ್, ಆರ್ಕಿಮಿಡಿಸ್, ರಾಮಾನುಜನ್, ಭಾಸ್ಕರ ಆಚಾರ್ಯ, ಮ್ಯಾಕ್ಸ್ವೆಲ್ ಮೊದಲಾದ ಗಣಿತ ಶಾಸ್ತ್ರಜ್ಞರ ಭಾವಚಿತ್ರಗಳು ನಮ್ಮನ್ನು ಗಣಿತ ಲೋಕಕ್ಕೆ ಕೈ ಬೀಸಿ ಕರೆಯುತ್ತವೆ. ವಿಶಾಲ ಸಭಾಭವನ, ಎಲ್.ಇ.ಡಿ ಟಿ.ವಿ, ಐರಿಸ್ ಡಿವೈಸ್, ವಿದ್ಯಾರ್ಥಿಗಳಿಗಾಗಿ ಪೀಠೋಪಕರಣಗಳು - ಇತ್ಯಾದಿ ಮೂಲಸೌಲಭ್ಯಗಳೊಂದಿಗೆ ಪ್ರಯೋಗಾಲಯ ಸುಸಜ್ಜಿತವಾಗಿದೆ.
ಇದೇ 9ರಂದು ಸಮಾರೋಪ ಸಮಾರಂಭವು ಶಾಸಕ ಕೆ.ವಸಂತ ಬಂಗೇರರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಹಾಗೂ ಶಾಲೆಯ ಪ್ರಗತಿಗಾಗಿ ಶ್ರಮಿಸಿದ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರನ್ನು ಸನ್ಮಾನಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.