ತಾಲ್ಲೂಕಿನ ರಾಂಪುರ ಗ್ರಾಮದ ರೈತರಾಜ್ಯ ರೈತ ಸಂಘದ ಉಪಾಧ್ಯಕ್ಷ ಆರ್.ಜಿ.ಬಸವರಾಜ ಅವರು ಎರಡು ಎಕರೆಯಲ್ಲಿ ಮುಳುಗಾಯಿ ಬೆಳೆದಿದ್ದರು. ಈಗ ಫಸಲು ಬಂದಿದೆ. ಕೊಯ್ದು ಮಾರುಕಟ್ಟೆಗೆ ಒಯ್ದರೆ ಕೆ.ಜಿ.ಗೆ ₹ 2ರಂತೆ ಕೇಳಿದ್ದರು. ಕೆ.ಜಿ.ಗೆ ಕನಿಷ್ಠ ₹ 10 ಸಿಗದೇ ಇದ್ದರೆ ಅಸಲು ಕೂಡ ಸಿಗುವುದಿಲ್ಲ ಎಂದು ಮಾರಾಟ ಮಾಡದೇ ವಾಪಸ್ಸಾದ ಬಸವರಾಜ್ ಅವರು ಧರ್ಮಸ್ಥಳಕ್ಕೆ ನೀಡಲು ನಿರ್ಧರಿಸಿದರು. ಹೆತ್ತವರಾದ ಆರ್.ಜಿ.ಚಂದ್ರಪ್ಪ, ಸರೋಜಮ್ಮ, ಸಹೋದರರಾದ ಆರ್.ಜಿ.ಹನುಮಂತಗೌಡ, ಆರ್.ಜಿ.ಮುನಿಕುಮಾರ, ಅತ್ತಿಗೆ, ಪತ್ನಿ ಜತೆ ಚರ್ಚಿಸಿ ಬುಧವಾರ ರಾತ್ರಿಯೇ ಲಾರಿ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ 4 ಟನ್ ಮುಳುಗಾಯಿ ಜತೆಗೆ ಸುತ್ತಮುತ್ತಲಿನ ರೈತರೂ ಕೈಜೋಡಿಸಿದ್ದರಿಂದ 5 ಟನ್ ಮುಳುಗಾಯಿಯಾಗಿದೆ.