ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸೆ.2ರಂದು ಮಧ್ಯಾಹ್ನ ದಾವಣಗೆರೆಗೆ ಬರಲಿದ್ದಾರೆ. ಹೀಗಾಗಿ ಜಿಎಂಐಟಿ ಹೆಲಿಪ್ಯಾಡ್, ಜಿಎಂಐಟಿ ವಿದ್ಯಾಲಯ, ಗಾಂಧಿಭವನ, ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ವಸತಿ ಶಾಲೆಗಳನ್ನು ಸಿಆರ್ಪಿಎಫ್ ಯೋಧರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯಿಂದ ಬಿಎಸ್ಎಫ್ ಹೆಲಿಕಾಪ್ಟರ್ನಲ್ಲಿ ಜಿಎಂಐಟಿ ಹೆಲಿಪ್ಯಾಡ್ಗೆ ಅಮಿತ್ ಶಾ ಮಧ್ಯಾಹ್ನ 2.15ಕ್ಕೆ ಬರಲಿದ್ದಾರೆ. ಜಿಎಂಐಟಿ ಅತಿಥಿ ಗೃಹದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲಿದ್ದಾರೆ. ಮಧ್ಯಾಹ್ನ 3.10ಕ್ಕೆ ಅಲ್ಲಿಂದ ಹೊರಟು ಗಾಂಧಿಭವನಕ್ಕೆ ಬರಲಿದ್ದಾರೆ. 3.20ರಿಂದ ಗಾಂಧಿಭವನ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. 3.40ಕ್ಕೆ ಗಾಂಧಿಭವನದಿಂದ ಹೊರಟು ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಗೌರವ ಸಮರ್ಪಿಸಿದ ಬಳಿಕ ಪೊಲೀಸ್ ಪಬ್ಲಿಕ್ ವಸತಿ ಶಾಲೆಯನ್ನು ಸಂಜೆ 4ಕ್ಕೆ ಉದ್ಘಾಟಿಸಲಿದ್ದಾರೆ.
ಸಂಜೆ 4.30ಕ್ಕೆ ಕೊಂಡಜ್ಜಿಯಿಂದ ಹೊರಡುವರು. ಸಂಜೆ 4.50ಕ್ಕೆ ಜಿಎಂಐಟಿಯಲ್ಲಿ ಹೈಟೆಕ್ ಗ್ರಂಥಾಲಯಕ್ಕೆ ಚಾಲನೆ ನೀಡುವರು. ಸಂಜೆ 5.05ಕ್ಕೆ ಜಿಎಂಐಟಿ ಹೆಲಿಪ್ಯಾಡ್ನಿಂದ ಹುಬ್ಬಳ್ಳಿಗೆ ತೆರಳುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮಿತ್ ಶಾ ಕಾರ್ಯಕ್ರಮ ನಡೆಯುವ ಪ್ರದೇಶಗಳಲ್ಲಿ ಎಲ್ಲಾ ಚಲನವಲನಗಳ ನಿಯಂತ್ರಣ ಸಿಆರ್ಪಿಎಫ್ ಕೈಯಲ್ಲಿರಲಿದೆ. ಹೊರಗಿನ ಬಂದೋಬಸ್ತ್ಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಗೃಹಸಚಿವರು ಮತ್ತು ಗಣ್ಯರು ಹೋಗುವ ರಸ್ತೆ ಬದಿಯಲ್ಲಿ ಫುಟ್ಪಾತ್ ನಲ್ಲಿರುವ ಗೂಡಂಗಡಿಗಳನ್ನೂ ತೆರವುಗೊಳಿಸಲಾಗಿದೆ. ಎಲ್ಲ ಕಡೆ ಪೊಲೀಸ್ ಕಣ್ಗಾವಲು ಇಡಲಾಗಿದೆ.