ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗದೀಶ ಶೆಟ್ಟರ್ ಗುಜರಿ ವಸ್ತು: ಶಾಸಕ ಬಸವರಾಜು ವಿ. ಶಿವಗಂಗಾ

Published 25 ಜನವರಿ 2024, 15:13 IST
Last Updated 25 ಜನವರಿ 2024, 15:13 IST
ಅಕ್ಷರ ಗಾತ್ರ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದರಿಂದ ನಷ್ಟವಿಲ್ಲ. ಏಕೆಂದರೆ ಅವರೊಬ್ಬ ಗುಜರಿ ವಸ್ತು (ಸ್ಕ್ರಾಪ್ ಮೆಟಿರೀಯಲ್) ಎಂದರೆ ತಪ್ಪಾಗಲಾರದು ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ಟೀಕಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಾಜಿ ಸಿಎಂ ಎಂದು ಕರೆದು ತಂದಿರಲಿಲ್ಲ. ಅವರೊಬ್ಬ ಹಿರಿಯ, ಜವಾಬ್ದಾರಿಯುತ, ಮುತ್ಸದಿ ರಾಜಕಾರಣಿ ಎಂದು ಅವರ ಹಿರಿತನಕ್ಕೆ ಗೌರವ ಕೊಟ್ಟು ಕಾಂಗ್ರೆಸ್‌ಗೆ ಸೇರಿಸಿಕೊಂಡೆವು. 35 ಸಾವಿರ ಮತಗಳಿಂದ ಸೋತರೂ ಎಂಎಲ್‌ಸಿ ಮಾಡಿದೆವು. ಆದರೂ ಕೊನೆಗೆ ಅವರ ಬುದ್ಧಿ ತೋರಿಸಿದರು. ಅವರ ಹಿರಿತನಕ್ಕೆ ಗೌರವ ಕೊಟ್ಟರೂ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿಯಾದವರು ಮುಂದಿನ ಹೆಜ್ಜೆ ಇಡಬೇಕು. ಅಧಿಕಾರದ ಆಸೆಗೆ ಸದಾನಂದ ಗೌಡ ಅವರ ಸಂಪುಟದಲ್ಲಿ ಅವರು ಸಚಿವರಾದಗಲೇ ಅವರ ಯೋಗ್ಯತೆ ಗೊತ್ತಾಯಿತು. ಇಷ್ಟು ದಿನದ ಅವರ ರಾಜಕಾರಣ ವೈಯಕ್ತಿಯ ಸಂಘಟನೆಯಿಂದ ಅಲ್ಲ. ಬದಲಾಗಿ ಬಿಜೆಪಿ ಕೋಮುವಾದಿ ಹೆಸರಲ್ಲಿ ಗಲಾಟೆ ಹೆಸರಲ್ಲಿ ಗೆದ್ದು ಬಂದವರು’ ಕುಟುಕಿದರು.

‘ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದು, ರಾಮನ ಹೆಸರಿನಲ್ಲಿ ಭಕ್ತರಿಗೆ ವಂಚನೆ ಮಾಡಿ ಗೆಲ್ಲುವ ಮೂಲಕ ಕೇಂದ್ರದಲ್ಲಿ ಮಂತ್ರಿಯಾಗಬಹುದು ಎಂಬ ಆಸೆ ಬಂದಿದೆ. ಅಧಿಕಾರದಾಹಿ ಶೆಟ್ಟರ್ ಅವರು ಎಲ್ಲಿ ಸ್ಪರ್ಧಿಸಿದರೂ ಜನರು ಅವರಿಗೆ ಉತ್ತರ ಕೊಡುತ್ತಾರೆ. ಅವರು ರಾಜಕೀಯ ನಿವೃತ್ತಿಯಾಗುವಂತೆ ಮಾಡುತ್ತಾರೆ’ ಎಂದರು.

‘ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್ ಅವರಂತೆ ಒಂದು ಸಿದ್ಧಾಂತವಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಅಧಿಕಾರವೇ ಮುಖ್ಯವಾದ ಶೆಟ್ಟರ್‌ ಅವರನ್ನು ನೋಡಿ ನಾವು ಎಲ್ಲಿ ಆ ರೀತಿ ಕಲಿತುಬಿಡುತ್ತೇವೋ ಎನ್ನುವ ಭಯವಾಗುತ್ತಿದೆ. ಪಕ್ಷಕ್ಕೆ ಸೇರಿಸಿಕೊಂಡರೂ ಆ ಗೌರವ ಉಳಿಸಿಕೊಳ್ಳುವ ಯೋಗ್ಯತೆ ಅವರಿಗೆ ಇಲ್ಲ. ಲಕ್ಷ್ಮಣ ಸವದಿ ಉತ್ತಮ ನಾಯಕ. ಅವರು ಈ ರೀತಿ ಹೆಜ್ಜೆ ಇಡುವುದಿಲ್ಲ’ ಎಂದು ಹೇಳಿದರು.

‘ಜಗದೀಶ ಶೆಟ್ಟರ್ ಸೇರ್ಪಡೆಯಿಂದ ನಷ್ಟವಿಲ್ಲ’
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ನಮಗೇನು ನಷ್ಟವಿಲ್ಲ. ನಮ್ಮ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿರಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು. ‘ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‌ಗೆ ಇರಬೇಕಾದ ಮತಗಳು ಇದ್ದೇ ಇರ್ತಾವೆ ಯಾವುದೇ ಸಮಸ್ಯೆ ಇಲ್ಲ. ಎಲ್ಲಾ  ಸ್ಥಾನಮಾನಗಳನ್ನು ನೀಡಿದ್ದೆವು. ಏನು ಮಾಡುವುದು’ ಎಂದರು. ‘ಲೋಕಸಭೆ ಚುನಾವಣೆಗೆ ಟಿಕೆಟ್‌ ಅನ್ನು ಎಲ್ಲಿಯಾದರೂ ಕೊಡಲಿ ನಮಗೇನು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT