ಹೊನ್ನಾಳಿ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಭಾನುವಾರ 25 ಲೀಟರ್ ಹಾಲಿನಿಂದ ಅಭಿಷೇಕ ಮಾಡಿದರು.
ಭಾನುವಾರ ಸಂಜೆ 5.30ಕ್ಕೆ ರೇಣುಕಾಚಾರ್ಯ ಅವರು ಪಟ್ಟಣದ ಸಂಪಿಗೆ ರಸ್ತೆಯಲ್ಲಿ ಕಾರಿನಿಂದ ಇಳಿದು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನಡೆದು ಬರುತ್ತಿದ್ದ ಸಂದರ್ಭದಲ್ಲಿ ಯುವತಿಯರು ಅವರಿಗೆ ಆರತಿ ಮಾಡಿ ಶುಭ ಕೋರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್.ಮಹೇಶ್ ಅವರು 30 ಅಡಿ ಎತ್ತರವಿರುವ ಶಾಸಕರ ಕಟೌಟ್ ಎದುರಿನಲ್ಲಿಯೇ ರೇಣುಕಾಚಾರ್ಯ ಮತ್ತು ಪತ್ನಿ ಸುಮಾ ಅವರನ್ನು ನಿಲ್ಲಿಸಿ ಏಕಾಏಕಿ 25 ಲೀಟರ್ ಹಾಲನ್ನು ಅವರ ಮೇಲೆ ಸುರಿಯುವ ಮೂಲಕ ಹಾಲಿನ ಅಭಿಷೇಕ ಮಾಡಿಸಿದರು.
ಇದರಿಂದ ಒಂದು ಕ್ಷಣ ಬೆಚ್ಚಿಬಿದ್ದ ರೇಣುಕಾಚಾರ್ಯ ಸಾವರಿಸಿಕೊಂಡು ಅಭಿಮಾನಿಗಳ ಪ್ರೀತಿ ಕಂಡು ಅವರೊಂದಿಗೆ ಸಂತೋಷ ಹಂಚಿಕೊಂಡರು. ಈ ವೇಳೆಯಲ್ಲಿ ನೂರಾರು ಅಭಿಮಾನಿಗಳು ಅವರಿಗೆ ಕೇಕ್ ತಿನ್ನಿಸಿ ಶುಭ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅವರಿಗೆ ಹಾಲಿನ ಅಭಿಷೇಕ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.