ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MLC Election | ಬಿಜೆಪಿ ವರಿಷ್ಠರು ಕೈ ಕೊಟ್ಟರು: ರಘಪತಿ ಭಟ್ 

Published 29 ಮೇ 2024, 6:50 IST
Last Updated 29 ಮೇ 2024, 6:50 IST
ಅಕ್ಷರ ಗಾತ್ರ

ಹೊನ್ನಾಳಿ: ‘ಒಂದೂವರೆ ವರ್ಷದ ಹಿಂದೆ ಪರಿಷತ್ ಚುನಾವಣೆಗೆ ತಯಾರಾಗುವಂತೆ ಹೇಳಿದ್ದ ಬಿಜೆಪಿ ನಾಯಕರು ಟಿಕೆಟ್ ಕೊಡದೇ ಕೈಕೊಟ್ಟರು’ ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಆರೋಪಿಸಿದರು.

ಪಟ್ಟಣದ ಸಮೀಪದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಈ ಬಾರಿಯ ಚುನಾವಣೆ ಪಕ್ಷ ಆಧಾರಿತ ಅಲ್ಲ, ವ್ಯಕ್ತಿ ಆಧಾರಿತ. ಡಾ. ಧನಂಜಯ ಸರ್ಜಿ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದವರು. ಆದರೆ ನಾನು ಉಡುಪಿ ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ’ ಎಂದರು. 

‘ಚಿಕ್ಕ ವಯಸ್ಸಿನಲ್ಲಿದ್ದಾಗ ಬಹುತೇಕ ಮಕ್ಕಳು ಸಂಘ ಪರಿವಾರಕ್ಕೆ ಹೋಗುವುದು ಸಾಮಾನ್ಯ, ಅದರಂತೆ ಡಾ. ಧನಂಜಯ ಸರ್ಜಿ ಅವರು ಹೋಗಿರಬಹುದು. ಆದರೆ ಅವರು ಕಟ್ಟಾ ಆರ್‌ಎಸ್‍ಎಸ್‌ನವರಲ್ಲ. ಸಂಘದಲ್ಲಿ 40 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗದ ಗಿರೀಶ್ ಪಟೇಲ್ ಅವರಿಗೆ ಟಿಕೆಟ್ ಕೊಟ್ಟಿದ್ದರೆ ನಾನು ಚುನಾವಣೆ ಗೋಜಿಗೆ ಹೋಗುತ್ತಿರಲಿಲ್ಲ’  ಎಂದು ರಘುಪತಿ ಹೇಳಿದರು. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಜಾತಿಯ ಕಾರಣಕ್ಕೆ ಟಿಕೆಟ್ ನೀಡಲಿಲ್ಲ. ಆದರೂ ನಾನು ಪಕ್ಷಕ್ಕೆ ದ್ರೋಹ ಮಾಡಲಿಲ್ಲ ಎಂದ ಅವರು, ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಉದ್ದೇಶಿಸಿದ್ದೇನೆ ಎಂದರು.

ಆರ್‌ಎಸ್‍ಎಸ್‌ ಮುಖಂಡರಾದ ನಾರಾಯಣರಾವ್, ಉಮಾನಾಥ್, ಬಿಜೆಪಿ ಮುಖಂಡ ಬಿಂಬಾ ಮಂಜುನಾಥ್, ಎಂ. ವಾಸಪ್ಪ, ಅಶ್ವಿನಿ, ವಕೀಲರಾದ ಶಾಂತವೀರಪ್ಪ, ಮಂಜುನಾಥ್, ಕತ್ತಿಗೆ ನಾಗರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT