ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೇ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆ ಪ್ರಕರಣದ ನಂತರ ಮೊದಲ ಬಾರಿಗೆ ಭಾನುವಾರ ಸಿ.ಎಂ. ಜತೆಗೆ ವೇದಿಕೆ ಹಂಚಿಕೊಂಡರು. ಆದರೆ ಪರಸ್ಪರ ಮುಖ ಕೊಟ್ಟು ಮಾತನಾಡಲಿಲ್ಲ.
ಕಾಗಿನೆಲೆ ಕನಕಪೀಠದ ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಅಂತರ ಕಾಯ್ದುಕೊಂಡದ್ದು ಎದ್ದುಕಂಡಿತು. ‘ಕನಕ ಜಯಂತಿಗೆ ರಜೆ ನೀಡಿದವರು ಮುಖ್ಯಮಂತ್ರಿ ಯಡಿಯೂರಪ್ಪ’ ಎಂದುಭಾಷಣ ಮಾಡುವಾಗ ಈಶ್ವರಪ್ಪ ಪ್ರಸ್ತಾಪಿಸಿದರಾದರೂ ಅವರ ನಡುವೆ ಆತ್ಮೀಯತೆ ಕಂಡುಬರಲಿಲ್ಲ.
ಕಾರ್ಯಕ್ರಮಕ್ಕಿಂತ ಮೊದಲು ಸುದ್ದಿಗಾರರ ಜತೆಗೆ ಮಾತನಾಡಲು ಈಶ್ವರಪ್ಪ ನಿರಾಕರಿಸಿದರು. ಯಡಿಯೂರಪ್ಪ ಮಾತನಾಡಿದರಾದರೂ, ಈಶ್ವರಪ್ಪ ಅವರ ಪತ್ರದ ಬಗ್ಗೆ ಕೇಳಿದಾಗ, ‘ಅದೆಲ್ಲ ಯಾಕೆ ಚರ್ಚೆ ಮಾಡುತ್ತೀರಿ’ ಎಂದಷ್ಟೇ ಪ್ರತಿಕ್ರಿಯಿಸಿದರು.