ದಾವಣಗೆರೆ: ವೀರಶೈವ ಸಮಾಜವನ್ನು ಕಟ್ಟುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಪರಿಶ್ರಮ ಮಹತ್ವಪೂರ್ಣ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಅಭಿನವ ರೇಣುಕ ಮಂದಿರದ ಪುನರ್ ನಿರ್ಮಾಣಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
‘ವೀರಶೈವ ಸಮಾಜ ಕಟ್ಟುವ ವೇಳೆ ಎದುರಾಗುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಜಾಣ್ಮೆ ಬಿ.ಎಸ್. ಯಡಿಯೂರಪ್ಪ ಮತ್ತು ಶಾಮನೂರು ಶಿವಶಂಕರಪ್ಪ ಅವರಿಗೆ ಇದೆ’ ಎಂದರು.
ದಾವಣಗೆರೆಯಲ್ಲಿ ಕಳೆದ ವರ್ಷ ನಡೆದ ಶರನ್ನವರಾತ್ರಿ ಮತ್ತು ಧರ್ಮ ಸಮ್ಮೇಳನಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಮನೂರು ಶಿವಶಂಕರಪ್ಪ ಅವರು ರೇಣುಕ ಮಂದಿರ ಪುನರ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೋರಿದ್ದರು. ಆಗ ಸ್ಥಳದಲ್ಲೇ ₹ 2 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದ್ದರು. ಈಗ ಅನುದಾನ ಬರಲಿದ್ದು, ರೇಣುಕ ಮಂದಿರವನ್ನು ಸುಸಜ್ಜಿತ, ಆಧುನಿಕವಾಗಿ ನಿರ್ಮಾಣ ಮಾಡಲಾಗುವುದು. ₹ 2 ಕೋಟಿ ಅನುದಾನ ಸಾಲದು ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿದರು.
ಶ್ರೀಮದ್ ಅಭಿನವ ರೇಣುಕ ಮಂದಿರ ಟ್ರಸ್ಟ್ನ ಕಾರ್ಯದರ್ಶಿ, ಪಾಲಿಕೆ ಸದಸ್ಯ ದೇವರಮನಿ ಶಿವಕುಮಾರ್, ಟ್ರಸ್ಟ್ನ ಖಜಾಂಚಿ ಅಥಣಿ ಪ್ರಶಾಂತ್, ವೀರಶೈವ ಸಮಾಜದ ಮುಖಂಡರಾದ ದೇವರಮನಿ ಶಿವರಾಜ್, ಇಟ್ಟಿಗುಡಿ ಮಹಾದೇವಪ್ಪ, ಎಲ್.ಎಸ್. ದೇವೇಂದ್ರಪ್ಪ, ಸಿ.ಕೆ. ಬಸವರಾಜಪ್ಪ, ರುದ್ರೇಶ್ ಇದ್ದರು.