ಹರಿಹರ: ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಸಮಿತಿಯಿಂದ ಆಯೋಜಿಸಿದ್ದ 60ನೇ ವರ್ಷದ ವಿನಾಯಕ ಮಹೋತ್ಸವದಲ್ಲಿ ಭಾನುವಾರ ಮುಸ್ಲಿಮರಿಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ಸಾಮರಸ್ಯದ ಸಂದೇಶ ರವಾನಿಸಲಾಯಿತು.
ಪ್ರತಿಷ್ಠಾಪನೆಯ 5ನೇ ದಿನವಾದ ಭಾನುವಾರ ವಿಸರ್ಜನೆಗೂ ಮುನ್ನ ಮಧ್ಯಾಹ್ನ ಮೈದಾನದಲ್ಲಿ ಪೆಂಡಾಲ್ ಹಾಕಿ ಭಕ್ತರಿಗೆ ಸಾಲಾಗಿ ಬರಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ಮಂದಿಗೆ ಅನ್ನ ಸಾಂಬಾರ್ ಹಾಗೂ ಸಿಹಿಯನ್ನು ಬಡಿಸಲಾಯಿತು.
‘ಮಾನವೀಯತೆ ಧರ್ಮಕ್ಕಿಂತ ಎತ್ತರದ ಸ್ಥಾನದಲ್ಲಿದೆ. ಹಿಂದೂಗಳ ಹಬ್ಬದ ಸಡಗರದಲ್ಲಿ ನಾವೂ ಭಾಗಿಯಾಗಬೇಕೆಂಬ ಉದ್ದೇಶದಿಂದ ಸಮಾಜದ ಹಿರಿಯರೊಂದಿಗೆ ಚರ್ಚಿಸಿ ಅನ್ನ ಸಂತರ್ಪಣೆ ಮಾಡಿದ್ದೇವೆ‘ ನಗರ ಸಭಾ ಸದಸ್ಯ ಎಂ.ಎಸ್. ಬಾಬುಲಾಲ್ ತಿಳಿಸಿದರು.
‘ಹರಿಹರದಲ್ಲಿ ಎಲ್ಲಾ ಧರ್ಮೀಯರು ಸಹೋದರರಂತೆ ಇದ್ದೇವೆ ಎಂಬ ಸಂದೇಶವನ್ನು ಸಾರಿದ್ದೇವೆ’ ಎಂದು ಸಾರ್ವಜನಿಕ ವಿನಾಯಕ ಉತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ನಂದಿಗಾವಿ ಸಂತಸ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಸದಸ್ಯ ಸೈಯದ್ ಎಜಾಜ್ ಅಹ್ಮದ್, ಮುಸ್ಲಿಂ ಯುವಕರು ಭಕ್ತರಿಗೆ ಊಟ ಬಡಿಸಿದರು.
ವಿಸರ್ಜನೆ: ಭಾನುವಾರ ಸಂಜೆ 4ರಿಂದ ಗಣೇಶ ವಿಸರ್ಜನೆ ಮೆರವಣಿಗೆ ಆರಂಭವಾಯಿತು. ಡೊಳ್ಳು, ಬೊಂಬೆ ಕುಣಿತ, ಕುದುರೆ ಕುಣಿತ ಸೇರಿದಂತೆ ನಾನಾ ಕಲಾ ತಂಡಗಳ ವೈಭವ ಮೆರವಣಿಗೆ ಸೊಬಗನ್ನು ಹೆಚ್ಚಿಸಿದ್ದವು.