ಶಿವಮೊಗ್ಗ: ‘40–50 ವರ್ಷಗಳಿಂದ ನಿವೇಶನವಿಲ್ಲದೆ ಪರದಾಡುತ್ತಿರುವ ಕೊಳೆಗೇರಿಯ ಸುಮಾರು 150 ಕುಟುಂಬಗಳಿಗೆ ಸರ್ಕಾರಿ ಜಮೀನನ್ನು ಕಾಯ್ದಿರಿಸಿ ಅಭಿವೃದ್ಧಿಪಡಿಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿ ನಗರದ ನವುಲೆ ಕೊಳಚೆ ನಿವಾಸಿಗಳ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ವಾರ್ಡ್ ನಂ.2ರ ನವುಲೆ, ಅಂಬೇಡ್ಕರ್ ಕಾಲೊನಿಯಲ್ಲಿ ಪರಿಶಿಷ್ಟಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು 150 ಕುಟುಂಬಗಳು ವಾಸವಾಗಿದ್ದು, ತುಂಗಾ ನಾಲೆಯ ಎಡಭಾಗ ಮತ್ತು ಬಲಭಾಗದಲ್ಲಿ ಕಿರಿದಾದ ಮನೆ ಕಟ್ಟಿಕೊಂಡಿದ್ದಾರೆ. ಈಗಾಗಲೇ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ವರದಿ ನೀಡಿದ್ದಾರೆ. ಈ ಗ್ರಾಮದ ಸರ್ವೆ ನಂ.72ರಲ್ಲಿ 3 ಎಕರೆ ಜಮೀನನ್ನು ಕೊಳಚೆ ನಿವಾಸಿಗಳ ಸಂಘಕ್ಕೆ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ತುಂಗಾ ಎಡದಂಡೆ ಮತ್ತು ಬಲದಂಡೆಯ ಪಕ್ಕದಲ್ಲಿ ವಾಸ ಮಾಡುತ್ತಿರುವವರಿಗೆ ಮಳೆಗಾಲ ಬಂತೆಂದರೆ ಇಡೀ ನಗರದ ಕೊಳಚೆಯು ಕಾಲುವೆ ಮೂಲಕ ಬಡವರ ಮನೆಗಳಿಗೆ ನುಗ್ಗುತ್ತಿದೆ. ಜಮೀನನ್ನು ಕೊಳಚೆ ನಿರ್ಮೂಲನಾ ಜಾಗವೆಂದು ಘೋಷಿಸಿ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.
ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಅರಮಘಟ್ಟ ರಂಗಪ್ಪ, ಅಧ್ಯಕ್ಷ ಆರ್.ಶೇಷಪ್ಪ, ಗೌರವಾಧ್ಯಕ್ಷ ಬಿ.ಸೋಮಶೇಖರ್, ಪ್ರಮುಖರಾದ ಬಿ.ಎಚ್.ಚಂದ್ರಪ್ಪ, ನಾಗರಾಜ್ ಆರ್., ಜಗನ್ನಾಥ್ ಯು., ಗೋಪಿ ಬಿ.ಎಚ್., ಜೆ.ಟಿ.ಸದಾಶಿವ, ಮಧುಸೂದನ್ ರಾವ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.