ದಾವಣಗೆರೆ: ಮೂತ್ರಪಿಂಡದ ಸಮಸ್ಯೆ ಇಲ್ಲದಿದ್ದರೂ ಕೊರೊನಾ ವೈರಸ್ ದೃಢವಾದರೆ ಕಿಡ್ನಿಗೆ ನೇರವಾಗಿ ಹಾನಿ ಮಾಡುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ವಿಜ್ಙಾನ ವಿಭಾಗದ ಡಾ.ಎಸ್.ವಿಶ್ವನಾಥ್ ತಿಳಿಸಿದರು.
ಇಲ್ಲಿನ ಸಿದ್ಧಗಂಗಾ ಸಂಸ್ಥೆಯಲ್ಲಿಪತ್ರಕರ್ತರಿಗೆ ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ‘ಕೋವಿಡ್–19ರ ಸೋಂಕಿನ ನಂತರ ಮೂತ್ರಪಿಂಡ ಆರೈಕೆ’ ಕುರಿತು ವೆಬಿನಾರ್ನಲ್ಲಿ ಉಪನ್ಯಾಸ ನೀಡಿ, ‘ಸೈಟೊಕಿನ್ ಸ್ಟಾರ್ಮ್ ಮೂಲಕ ಆಮ್ಲಜನಕ ಪೂರೈಕೆ ತಡೆಹಿಡಿದು, ಜೀವಕೋಶಗಳನ್ನು ಕೊಂದು, ರಕ್ತವನ್ನು ಹೆಪ್ಟುಗಟ್ಟಿಸಿ ಹಾನಿ ಮಾಡುತ್ತದೆ. ಕೋವಿಡ್–19 ಸೋಂಕು ತಗುಲಿದ ಯಾರಿಗಾದರೂ ಮೂತ್ರಪಿಂಡ ಸಮಸ್ಯೆಯಾಗಬಹುದು’ ಎಂದು ಎಚ್ಚರಿಕೆ ನೀಡಿದರು.
'ಮಧುಮೇಹದಿಂದ ಬಳಲುವವರು ಮತ್ತು ಹೈಪರ್ಟೆನ್ಷನ್ ಇರುವವರಲ್ಲಿ ಹೆಚ್ಚಾಗಿ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಡಯಾಲಿಸಿಸ್ ಮಾಡಿಸುವಷ್ಟರ ಮಟ್ಟಿಗೆ ಮೂತ್ರಪಿಂಡದ ತೊಂದರೆ ಉಲ್ಬಣಿಸಿರುತ್ತದೆ. ಗುಣಮುಖರಾದ ರೋಗಿಗಳ ಮೂತ್ರ ಮತ್ತು ರಕ್ತದಲ್ಲಿನ ಪ್ರೊಟೀನ್ ತೀವ್ರತೆ ಬಗ್ಗೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
‘ಕೋವಿಡ್–19 ದೂರ ಇಡಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮುಖ್ಯ. ರೋಗನಿರೋಧಕ ಶಕ್ತಿ ಹೆಚ್ಚಾಗಿ ಇರುವ ವ್ಯಕ್ತಿ ಸೋಂಕು ತಗುಲಿದರೂ ಬೇಗ ಗುಣಮುಖನಾಗಬಹುದು. ರೋಗನಿರೋಧಕ ಶಕ್ತಿಯ ಮೇಲೆ ನಿಗಾ ವಹಿಸುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ರಕ್ಷಿಸಿಕೊಳ್ಳಬಹುದು. ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬೇಕು. ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡಬಾರದು’ ಎಂದು ಸಲಹೆ ನೀಡಿದರು.
ಪಾಲಿಕೆ ಉಪ ಆಯುಕ್ತ ಪ್ರಭುಸ್ವಾಮಿ ಉದ್ಘಾಟಿಸಿದರು. ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಜಿಲ್ಲಾ ಪ್ರತಿನಿಧಿ ಅಮಿತ್ ಕುಮಾರ್ ನಾರಾಯಣ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಮಣಿಪಾಲ್ ಆಸ್ಪತ್ರೆಯ ಪ್ರತಿನಿಧಿ ಅರುಣ್ ಚಕ್ರವರ್ತಿ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಇದ್ದರು. ವರದಿಗಾರರ ಕೂಟದ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ ಸ್ವಾಗತಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.