ಹೊನ್ನಾಳಿ: ಕೊರೊನಾ ಲಸಿಕೆ ಹಾಕಿಸುವಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಾರತಮ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಒಂಚಾಯಿತಿ ಸದಸ್ಯ ಡಿ.ಜಿ. ವಿಶ್ವನಾಥ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನ್ಯಾಮತಿ ತಾಲ್ಲೂಕಿನ ಒಡೆಯರಹತ್ತೂರು, ಗೋವಿನಕೋವಿ ಹಾಗೂ ಚೀಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಾನು ಭೇಟಿ ಕೊಟ್ಟಾಗ ತಾರತಮ್ಯ ಎಡಸಗಿರುವುದು ಕಂಡು ಬಂದಿದೆ. ಈ ಬಗ್ಗೆ ಅಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನು ವಿಚಾರಿಸಿದಾಗ ಶಾಸಕರ ಆದೇಶದಂತೆ ಮೊದಲು ಬಂದವರಿಗೆ ಲಸಿಕೆ ನೀಡಲಾಗುತ್ತಿದೆ’ ಎಂದು ಹೇಳಿದ್ದಾಗಿ ಅವರು ಹೇಳಿದರು.
‘ಲಸಿಕೆ ಬಂದಾಗ ಶಾಸಕರು ಕೂಡಲೇ ಅಯಾ ಭಾಗದ ತಮ್ಮ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸುತ್ತಾರೆ. ಲಸಿಕೆ ಮಾಹಿತಿ ಪಡೆದ ಅವರ ಪಕ್ಷದ ಕಾರ್ಯಕರ್ತರು ಮತ್ತು ತಮಗೆ ಬೇಕಾದವರಿಗೆ ಮಾಹಿತಿ ಕೊಟ್ಟು ಅಲ್ಲಿಗೆ ಬರುವಂತೆ ಮಾಡುತ್ತಾರೆ. ಹೀಗಾಗಿ ಲಸಿಕೆ ಕುರಿತು ಮುಂಚಿತವಾಗಿಯೇ ಮಾಹಿತಿ ಪಡೆದು ಲಸಿಕೆ ಕೇಂದ್ರಕ್ಕೆ ಬಂದು ಕಾಯುತ್ತಾರೆ. ಗ್ರಾಮದ ಇತರ ಜನರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ’ ಎಂದು ಡಿ.ಜಿ. ವಿಶ್ವನಾಥ್ ಆರೋಪಿಸಿದರು.
‘ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂದಾಜು 200 ಲಸಿಕೆ ಬಂದರೆ ಅಲ್ಲಿ 400ಕ್ಕೂ ಹೆಚ್ಚು ಜನ ಸರದಿಯಲ್ಲಿ ಕಾಯುತ್ತಿರುತ್ತಾರೆ. ಮುಂಚಿತವಾಗಿಯೇ ಕಾಯುತ್ತಿದ್ದ ಅವರ ಪಕ್ಷದ ಕಾರ್ಯಕರ್ತರು ಮತ್ತು ಬೇಕಾದವರಿಗೆ ಲಸಿಕೆ ಸುಲಭವಾಗಿ ಸಿಗುತ್ತದೆ. ಉಳಿದವರು ವಾಪಾಸಾಗುತ್ತಾರೆ. ಇಂತಹ ಪರಿಸ್ಥಿತಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ’ ಎಂದು ದೂರಿದರು.
‘ಶಾಸಕರು ಬೆಂಗಳೂರಿಗೆ ಹೋದ ಸಂದರ್ಭದಲ್ಲಿ ಯಾವ ಕೇಂದ್ರದಲ್ಲೂಲಸಿಕೆ ಹಾಕುವುದಿಲ್ಲ. ಲಸಿಕೆ ಹಾಕುವಾಗ ಶಾಸರು ಖುದ್ದು ಹಾಜರಿರಬೇಕು ಎಂಬ ಕಾರಣದಿಂದ ಹೀಗೆ ಮಾಡಲಾಗುತ್ತಿದೆ’ ಎಂದು ವಿಶ್ವನಾಥ್ ಆರೋಪಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ಕೊಡುವುದಾಗಿ ಹೇಳುತ್ತಿದೆ. ಆದರೆ, ಲಸಿಕೆಯು ಮೊದಲು ಅವರ ಕಾರ್ಯಕರ್ತರು, ಬಂಧುಗಳಿಗೆ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಲಸಿಕೆ ಕೊಡುತ್ತಿರುವುದು ಜನರ ತೆರಿಗೆ ಹಣದಿಂದಲೇ ಹೊರತು ಅದಕ್ಕಾಗಿ ಹಣ ಪ್ರಿಂಟ್ ಮಾಡುವುದಿಲ್ಲ. ಲಸಿಕೆ ಹಾಕುವ ಸಂದರ್ಭದಲ್ಲಿ ಇಂತಹ ರಾಜಕೀಯ ಮಾಡಬಾರದು. ಇದು ಮುಂದುವರಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.