ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ನೀಡುತ್ತಿರುವ ಲಸಿಕೆ ಬಗ್ಗೆ ಯಾವುದೇ ಆಧಾರವಿಲ್ಲದೆ ಅಪಪ್ರಚಾರ ಮಾಡಿದರೆ, ವದಂತಿ ಹಬ್ಬಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೋವಿಶೀಲ್ಡ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಎಲ್ಲ ಪರೀಕ್ಷೆಗಳನ್ನು ಮಾಡಿ, ಯಾವುದೇ ಅಡ್ಡಪರಿಣಾಮ ಇಲ್ಲ ಎಂಬುದನ್ನು ಕಂಡುಕೊಂಡ ಬಳಿಕವೇ ಲಸಿಕೆಯನ್ನು ನೀಡಲು ಸರ್ಕಾರ ಕ್ರಮಕೈಗೊಂಡಿದೆ ಎಂದು ತಿಳಿಸಿದರು.
ಜಿಲ್ಲೆಗೆ 3500 ಕೋವಿಶೀಲ್ಡ್ ಲಸಿಕೆ, 708 ಕೋವಾಕ್ಸಿನ್ ಲಸಿಕೆ ಬಂದಿವೆ. ಆರೋಗ್ಯ ಕ್ಷೇತ್ರದ ಕೊರೊನಾ ವಾರಿಯರ್ ಗಳಿಗೆ ನೀಡಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಡಿಎಚ್ಒ ಡಾ.ನಾಗರಾಜ, ಡಿಎಸ್ಒ ಡಾ.ರಾಘವನ್, ಆರ್ ಸಿಎಚ್ಒ ಡಾ.ಮೀನಾಕ್ಷಿ ಅವರೂ ಇದ್ದರು.
ಮೊದಲ ವ್ಯಾಕ್ಸಿನ್ ಹಾಕಿಸಿಕೊಂಡ ಡಿ ಗ್ರೂಪ್ ನೌಕರ ರಾಜಾಭಕ್ಷಿ, ಎರಡನೆ ವ್ಯಾಕ್ಸಿನ್ ಹಾಕಿಸಿಕೊಂಡ ಡಾ. ಶಶಿಧರ್, 'ಮೊದಲು ಹಾಕಿಸಿಕೊಂಡಿರುವುದು ಖುಷಿಯಾಗಿದೆ. ಎಲ್ಲರೂ ಹಾಕಿಸಿಕೊಳ್ಳಬೇಕು' ಎಂದು ಸಲಹೆ ನೀಡಿದರು.