ಚನ್ನಗಿರಿ: ತಾಲ್ಲೂಕಿನ ವಿ. ರಾಮೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಅಣ್ಣನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.
ವಿ. ರಾಮೇನಹಳ್ಳಿ ಗ್ರಾಮದ ವಾಸಿ ಮೋಹನ್ (25) ಮೃತಪಟ್ಟವರು. ಆರೋಪಿ ಮನೋಜ ಪರಾರಿಯಾಗಿದ್ದಾನೆ. ಮನೋಜ ಹಾಗೂ ಮೋಹನ್ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಮದ್ಯಪಾನಕ್ಕೆ ಹಣ ಕೊಡುವ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಕುಡಿಯಲು ಹಣ ಕೇಳಿದಾಗ ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಮನೋಜ ಮನೆಯ ಹೊರಗಡೆ ಬಂದು ಕಲ್ಲು ಚಪ್ಪಡಿಯನ್ನು ಮೋಹನ್ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಮೋಹನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.