ದಾವಣಗೆರೆ: ನಗರದ ಉಪಕಾರಾಗೃಹದ ಗೋಡೆ ಹತ್ತಿ ಜಿಗಿದು ಪರಾರಿಯಾಗಿದ್ದ ಪೋಕ್ಸೊ ಪ್ರಕರಣದ ಆರೋಪಿಯನ್ನು ಪೊಲೀಸರು ಒಂದೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರ ಹೊರವಲಯದ ಕರೂರ ಪ್ರದೇಶದ ನಿವಾಸಿ ವಸಂತ ಶನಿವಾರ ಜೈಲಿನಿಂದ ಪರಾರಿಯಾಗಿದ್ದ. ಬಸವನಗರ ಠಾಣೆಯ ಇನ್ಸ್ಪೆಕ್ಟರ್ ಗುರುಬಸವರಾಜ್ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಕಾನ್ಸ್ಟೆಬಲ್ ನಿಜಲಿಂಗಪ್ಪ ನೀಡಿದ ಖಚಿತ ಮಾಹಿತಿ ಆಧರಿಸಿ ಸಬ್ ಇನ್ಸ್ಪೆಕ್ಟರ್ ನಾಗರಾಜ ಮತ್ತು ಸಿಬ್ಬಂದಿಯು ಹರಿಹರ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಆರೋಪಿಯನ್ನು ಭಾನುವಾರ ಬೆಳಿಗ್ಗೆ ಬಂಧಿಸಿದ್ದಾರೆ.
‘ಉಪ ಕಾರಾಗೃಹದ ಗೋಡೆ ಜಿಗಿದಾಗ ಆರೋಪಿಯ ಕಾಲಿಗೆ ಪೆಟ್ಟುಬಿದ್ದರೂ, ಅಲ್ಲಿಂದ ಪರಾರಿಯಾಗಿದ್ದ. ಬಳಿಕ ದುಗ್ಗಾವತಿಯ ಸಂಬಂಧಿಕರ ಮನೆಯೊಂದರಲ್ಲಿ ಅಡಗಿದ್ದ. ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿ ಬಂಧಿಸಿ, ಮತ್ತೆ ಜೈಲಿಗೆ ಕಳುಹಿಸಲಾಗಿದೆ’ ಎಂದು ಇನ್ಸ್ಪೆಕ್ಟರ್ ಗುರುಬಸವರಾಜ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.