ದಾವಣಗೆರೆ: ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೂವರಿಗೆ ರೆಡ್ ಕಾರ್ಪೆಟ್ ಹಾಸಿ, ಅವರ ಮೇಲೆ ಹೂವು ಚೆಲ್ಲಿ, ಚಪ್ಪಾಳೆ ತಟ್ಟಿ ಬೀಳ್ಕೊಡಲಾಯಿತು.
ಜಿಲ್ಲಾಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮೇಯರ್ ಅಜಯ್ ಕುಮಾರ್, ಡಿಎಚ್ಒ ಡಾ. ರಾಘವೇಂದ್ರ ಸ್ವಾಮಿ, ಡಿಎಸ್ಒ ಡಾ. ರಾಘವನ್, ಸರ್ಜನ್ ಡಾ. ಸುಭಾಶ್ಚಂದ್ರ,, ಎಎಸ್ಪಿ ರಾಜೀವ್, ವೈದ್ಯರು, ಪೊಲೀಸರು, ಶುಶ್ರೂಷಕರು, ಸಿಬ್ಬಂದಿ ಇದ್ದರು.
ವಿದೇಶದಿಂದ ಬಂದು ಕೊರೊನಾ ವೈರಸ್ ಸೋಂಕು ಮುಕ್ತರಾಗಿ ಒಂದು ತಂಡ ಹಿಂದೆ ಬಿಡುಗಡೆಯಾಗಿತ್ತು. ಇವತ್ತು 7 ಮಂದಿ ಬಿಡುಗಡೆಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಅದರಲ್ಲಿ ಮೂವರು ಈಗ ಬಿಡುಗಡೆಗೊಂಡಿದ್ದಾರೆ. ಉಳಿದ ನಾಲ್ವರು ಬೇರೆ ಕಾರಣಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಇನ್ನೂ 12 ಮಂದಿ ಬಿಡುಗಡೆಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.