ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗಬೇಕು. ಬದಲಾಗದೇ ಇದ್ದರೆ ಕೊನೆಯ ಕ್ಷಣದಲ್ಲಿ ಬಂಡಾಯವಾಗಿ ‘ಅಚ್ಚರಿ ಅಭ್ಯರ್ಥಿ’ಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್ ಹಾಗೂ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
‘ಅಭ್ಯರ್ಥಿ ಬದಲಾಗಲಿದ್ದಾರೆ ಎಂಬ ವಿಶ್ವಾಸ ಇದೆ. ಬದಲಿಸಿದ ಹತ್ತಾರು ನಿದರ್ಶನಗಳು ನಮ್ಮೆದುರಿಗೆ ಇವೆ. ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದವರೆಗೂ ಅಭ್ಯರ್ಥಿ ಬದಲಾವಣೆಗೆ ಅವಕಾಶವಿದೆ. ಕೊನೆಯ ದಿನದವರೆಗೂ ಕಾಯುತ್ತೇವೆ. ಬದಲಿಸದಿದ್ದರೆ ಬಿಜೆಪಿಯಲ್ಲಿರುವ ಪ್ರಮುಖರೊಬ್ಬರನ್ನು ಕಣಕ್ಕಿಳಿಸಿ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಪ್ಪಿಸುತ್ತೇವೆ’ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
‘ಮೋದಿ, ಜೆ.ಪಿ.ನಡ್ಡಾ, ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ನಾವು ಹೇಳಿಕೆ ನೀಡಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಹೋಳಿ ಹಬ್ಬದ ನಂತರ ವಿವಿಧ ಮಠಾಧೀಶರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಎ.ಎಚ್. ಶಿವಯೋಗಿ ಸ್ವಾಮಿ, ಬಸವರಾಜ್ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ, ಮಾಡಾಳ್ ಮಲ್ಲಿಕಾರ್ಜುನ್, ಡಾ.ಟಿ.ಜಿ. ರವಿಕುಮಾರ್ ಈ ಸಂದರ್ಭ ಇದ್ದರು.