ಚನ್ನಗಿರಿ: ಪಟ್ಟಣದಲ್ಲಿ ವಾಲ್ಮೀಕಿ ಪುತ್ಥಳಿ ಮರು ಪ್ರತಿಷ್ಠಾಪನೆಗೆ ಒತ್ತಾಯಿಸಿ ಹತ್ತು ದಿನಗಳಿಂದ ನಾಯಕ ಸಮುದಾಯದವರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಅಂತೆಯೇ ಪಟ್ಟಣದಲ್ಲಿ ಹಲವು ವೃತ್ತಗಳಿಗೆ ಗಣ್ಯರ ಹೆಸರು ನಾಮಕರಣ ಮಾಡುವಂತೆ ವಿವಿಧ ಸಮುದಾಯದವರು ಮನವಿ ನೀಡಿರುತ್ತಾರೆ. ಎಲ್ಲ ಮನವಿಗಳನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಲಾಗುವುದು. ಈ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುವರು ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಾಧಿಕಾರಿ ಅವರ ಈ ಮನವಿಗೆ ಪುರಸಭೆಯ ಎಲ್ಲ ಸದಸ್ಯರು ಒಕ್ಕೂರಲಿನಿಂದ ಅಂಗೀಕಾರ ನೀಡಿದರು.
‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಲವಾರು ವಾರ್ಡ್ಗಳಲ್ಲಿ ಮೂರು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಹಿರೇಮಳಲಿಯ ಬಳಿ ಇರುವ ಭದ್ರಾ ನಾಲೆಯ ನೀರನ್ನು ಪಟ್ಟಣದ ಎಲ್ಲ ವಾರ್ಡ್ಗಳಿಗೆ ಸರಬರಾಜು ಮಾಡಲು ಪೈಪ್ಲೈನ್ ಕಾಮಗಾರಿಗೆ ಕ್ರಿಯಾ ಯೋಜನೆ ತಯಾರಿಸಿ, ಪಟ್ಟಣದ ಜನರಿಗೆ ನೀರು ಕೊಡಿ’ ಎಂದು ಸದಸ್ಯರಾದ ಜಿ.ನಿಂಗಪ್ಪ, ಪರಮೇಶ್ ಪಾರಿ, ಕಮಲಾ ಹರೀಶ್, ಅಮೀರ್ ಅಹಮ್ಮದ್, ನಂಜುಂಡಪ್ಪ, ಶ್ರೀಕಾಂತ್ ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ‘ಸೂಳೆಕೆರೆಯ ನೀರನ್ನು ಶನಿವಾರದಿಂದಲೇ ಪೂರೈಸಲಾಗುತ್ತಿದ್ದು, ಯಾರೂ ಕುಡಿಯಲು ಬಳಸಬಾರದು. ಗೃಹ ಬಳಕೆಗೆ ಮಾತ್ರ ಉಪಯೋಗಿಸಬೇಕು. ಸೂಳೆಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಲಾಗುವುದು. ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಜರೀನಾಬೀ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.