ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಅಕ್ರಮ ಮರಳು ಗಣಿಗಾರಿಕೆ: ತನಿಖೆಗೆ ಆಗ್ರಹ

Published 15 ಡಿಸೆಂಬರ್ 2023, 15:19 IST
Last Updated 15 ಡಿಸೆಂಬರ್ 2023, 15:19 IST
ಅಕ್ಷರ ಗಾತ್ರ

ದಾವಣಗೆರೆ: ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸಿರುವವರ ವಿರುದ್ಧ  ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ ಪದಾಧಿಕಾರಿಗಳು ಇಲ್ಲಿನ ವಿದ್ಯಾನಗರದ ಭೂ ವಿಜ್ಞಾನ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಕಚೇರಿ ಎದುರು ಜಮಾಯಿಸಿದ ವೇದಿಕೆ ಪದಾಕಾರಿಗಳು, ಹೊನ್ನಾಳಿ ತಾಲ್ಲೂಕಿನ ಕೋಟೆಹಾಳು ಗ್ರಾಮಸ್ಥರು,  ಭೂ ವಿಜ್ಞಾನ ಇಲಾಖೆ ಸಚಿವರ ಹೆಸರು ದುರುಪಯೋಗ ಮಾಡಿಕೊಂಡು, ನಿಯಮ ಬಾಹಿರವಾಗಿ ಮರಳು ಗಣಿಗಾರಿಕೆ ನಡೆಸಿರುವವ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

‘ಸುನೀಲ್ ಕುಮಾರ್ ಎಂಬುವರು ಕೋಟೆಹಾಳು ಹಾಗೂ ಹರಪನಹಳ್ಳಿ ತಾಲ್ಲೂಕು ಹಲುವಾಗಿಲು ಗ್ರಾಮಗಳ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಆದರೆ, ಇಲಾಖೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ಪ್ರಕೃತಿಗೆ ಧಕ್ಕೆ ಆಗುವ ರೀತಿ ಗಣಿಗಾರಿಕೆ ನಡೆಸಿದ್ದು, ಮರಳು ತೆಗೆದ ಬಳಿಕ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ‌ಜನ, ಜಾನುವಾರುಗಳಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ’ ಎಂದು ವೇದಿಕೆ ಗೌರವಾಧ್ಯಕ್ಷ ಮೃತ್ಯುಂಜಯ ಆರ್. ಹಂಪೋಳ್ ಒತ್ತಾಯಿಸಿದರು.

‘ಹಲವಾಗಿಲು ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆದಿದ್ದರೇ? ಎಷ್ಟು ನಕಲಿ ಪರ್ಮಿಟ್ ಮಾಡಿಸಿದ್ದಾರೆ ಎಂಬ ಕುರಿತು ಸಮಗ್ರ ತನಿಖೆ ನಡೆಸಬೇಕು. ಇಲಾಖೆಗೆ ಆಗಿರುವ ನಷ್ಟ ಭರಿಸಲು ದಂಡ ವಸೂಲಿ ಮಾಡಬೇಕು’ ಎಂದು ಆಗ್ರಹಿಸಿದರು.

ಶೀಘ್ರ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌  ಅವರಿಗೂ ಮನವಿ ಸಲ್ಲಿಸುವುದಾಗಿ ಪ್ರತಿಭಟನಕಾರರು ತಿಳಿಸಿದರು.

ಸಿ.ಟಿ. ಮಲ್ಲೇಶ್, ಕೋಟೆಹಾಳು ಗ್ರಾಮದ ಪರಮೇಶ್ವರಪ್ಪ, ರಮೇಶ್, ಶೇಷಯ್ಯ, ರಾಜಪ್ಪ, ತಿಮ್ಮಪ್ಪ, ನಾಗೇಶ್, ಜಯಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT