ಹರಪನಹಳ್ಳಿ: ತಾಲ್ಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಶೇಂಗಾ ಬೆಳೆಗೆ ಎಲೆ ತಿನ್ನುವ ದೊಮ್ಮಿ ಹುಳ ಕಾಟ ಹೆಚ್ಚಿದ್ದು,ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲ್ಲೂಕಿನ ಕೆಲವೆಡೆ ಈರುಳ್ಳಿಗೆ ಕೊಳೆ ರೋಗ ಕಾಣಿಸಿಕೊಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶೃಂಗಾರತೋಟ, ಅಲರಸೀಕೆರೆ, ಬಾಗಳಿ, ದಡಗಾರನಹಳ್ಳಿ, ಕಾಯಕದಹಳ್ಳಿ ಸುತ್ತಮುತ್ತ ಜಮೀನುಗಳಲ್ಲಿ ದೊಮ್ಮಿ ಹುಳು ಬಾಧೆ ಹೆಚ್ಚಾಗಿದೆ. ಇದರಿಂದ ಶೇಂಗಾ, ಸೇವಂತಿ, ಈರುಳ್ಳಿ ಬೆಳೆ ನಷ್ಟವಾಗಿದೆ.
ರೈತರು ಯಾವುದೇ ಔಷಧ ತಂದು ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ದಿನದಿಂದ ದಿನಕ್ಕೆ ಹೊಲವನ್ನೇ ಹುಳಗಳು ತಿಂದು ಹಾಕುತ್ತಿವೆ. ಶೃಂಗಾರತೋಟದ ಕುರಿ ರಾಮಪ್ಪ ಅವರ 2 ಎಕರೆ, ಹನುಮಂತ ಅವರ ಒಂದೂವರೆ ಎಕರೆ ಶೇಂಗಾ ಬೆಳೆ ನಾಶವಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲೂ ಹುಳಗಳ ಹಾವಳಿ ಹೆಚ್ಚಾಗುತ್ತಿದೆ. ಈರುಳ್ಳಿ, ಶೇಂಗಾ, ಸೇವಂತಿ ಬೆಳೆ ನಾಶವಾಗಿರುವ ರೈತರಿಗೆ ಸರ್ಕಾರ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ರೈತ ಉಪ್ಪಾರ ಬಸವರಾಜ್ ಒತ್ತಾಯಿಸಿದ್ದಾರೆ.