ದಾವಣಗೆರೆ: ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಶ್ರೀರಾಮನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ಹಲವು ಬಡಾವಣೆಗಳ ಶ್ರೀರಾಮನ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳ ಎದುರಿನ ರಸ್ತೆಯಲ್ಲಿ ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.
ದೇವಾಲಯಗಳಲ್ಲಿ ಅಭಿಷೇಕ, ಅಲಂಕಾರ ಪೂಜೆ ನಡೆದವು. ರಾಮನವಮಿ ಅಂಗವಾಗಿ ಭಕ್ತರು ಬೆಳಿಗ್ಗೆಯಿಂದಲೇ ದೇವಾಲಯಗಳಲ್ಲಿ ಶ್ರೀರಾಮನ ದರ್ಶನ ಪಡೆದರು.
ದೇವಾಲಯಗಳಲ್ಲಿ ತೊಟ್ಟಿಲೋತ್ಸವ, ಅಭಿಷೇಕ, ಸಂಜೆ ಭಜನೆ ಕಾರ್ಯಕ್ರಮಗಳು ನಡೆದವು. ದೇವಾಲಯಗಳಲ್ಲಿ ಜನಜಂಗುಳಿ ಇತ್ತು.
ಗಮನ ಸೆಳೆದ ಶೋಭಾಯಾತ್ರೆ: ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ರಾಮನವಮಿ ಉತ್ಸವ ಸಮಿತಿಯಿಂದ ಶೋಭಾಯಾತ್ರೆ ಆಯೋಜಿಸಲಾಗಿತ್ತು. ವೃತ್ತದಿಂದ ಪಿ.ಜೆ. ಬಡಾವಣೆಯ ರಾಮನ ದೇವಾಲಯದವರೆಗೆ ರಾಮನ ಮೂರ್ತಿಯ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನಂದಿಕೋಲು, ಡೋಲು ಸೇರಿದಂತೆ ಜನಪದ ಕಲಾ ತಂಡಗಳು ಮೆರುಗು ನೀಡಿದವು.
ಉತ್ಸವ ಸಮಿತಿಯ ಅಧ್ಯಕ್ಷ ಸಂತೋಷಕುಮಾರ್ ಕೆ., ಅಮೋಘವರ್ಷ, ಹರೀಶ್, ಸಚಿನ್, ಗುಬ್ಬಿ ಮಂಜುನಾಥ್, ಅರುಣ್ ಇದ್ದರು.
ದೇವಾಲಯಗಳಲ್ಲಿ ಪೂಜೆ: ಪಿ.ಜೆ. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ 6ರಿಂದಲೇ ವಿಶೇಷ ಅಭಿಷೇಕ ಪೂಜೆ ನಡೆದವು. ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಹೂವಿನ ಅಲಂಕಾರ ಪೂಜೆ ನಡೆದವು.
ಬಳಿಕ ತೊಟ್ಟಿಲೋತ್ಸವ ನಡೆಯಿತು. ಸಂಜೆ ಭಜನೆ ನಡೆಯಿತು. ಭಕ್ತರು ತೊಟ್ಟಿಲನ್ನು ತೂಗಿ, ರಾಮನ ದರ್ಶನ ಪಡೆದರು.
ಪಿ.ಬಿ. ರಸ್ತೆಯ ಕೋದಂಡರಾಮ ದೇವಾಲಯದಲ್ಲೂ ತೊಟ್ಟಿಲೋತ್ಸವ, ವಿಶೇಷ ಪೂಜೆ ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರ ದಂಡು ಹೆಚ್ಚಿತ್ತು. ಮಾರ್ಚ್ 31ರಂದು ಶ್ರೀರಾಮ ಪಟ್ಟಾಭಿಷೇಕ, ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಎಂ.ಸಿ.ಸಿ ‘ಎ’ ಬ್ಲಾಕ್ನಲ್ಲಿ ವಾನರ ಸೇನೆಯಿಂದ ಆಯೋಜಿಸಿದ್ದ ರಾಮನವಮಿ ಉತ್ಸವದಲ್ಲಿ ರಾಮ ದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಭಕ್ತರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.
ಹಿಂದೂ ಜನಜಾಗೃತಿ ಸೇನಾ ಸಮಿತಿಯ ಜಿಲ್ಲಾ ಘಟಕ ವತಿಯಿಂದ ಮಜ್ಜಿಗೆ ಮತ್ತು ಪಾಯಸ ವಿತರಿಸಲಾಯಿತು.
ಸಮಿತಿ ಅಧ್ಯಕ್ಷ ಚೇತನ್, ಜಿ. ಓಬಳೇಶ್, ಶಾಂತಕುಮಾರ್, ಮಧು, ಶಾಂತೇಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಕುಂತಲಾ, ವಿಜಯಲಕ್ಷ್ಮಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.