ಹರಪನಹಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನೋತ್ಸವದಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣನ ಭಾವಚಿತ್ರ ಪೂಜಿಸುವಂತೆ ಆದೇಶಿಸಬೇಕು. ರಾಯಣ್ಣನ ಜಯಂತಿಗೆ ರಜೆ ಕೊಡುವ ಅಗತ್ಯವಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತರಾದವರಲ್ಲ. ಆಚರಣೆ ನೆಪದಲ್ಲಿ ಬಟ್ಟೆಗಳ ಮೇಲೆ ಬರೆದುಕೊಳ್ಳುವ ಹೇಳಿಕೆಗಳು ಇನ್ನೊಂದು ಸಮಾಜವನ್ನು ಕೆಣಕುವುದಾಗಲೀ, ನೋವುಂಟು ಮಾಡುವುದಾಗಲೀ ಸಲ್ಲದು. ದೇಶದ ಪ್ರತಿಯೊಬ್ಬರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಪಾಲಿಸಬೇಕು ಎಂದರು.