ಹೊನ್ನಾಳಿ: ಹೊನ್ನಾಳಿಯಲ್ಲಿ ಫೆ. 1, 2 ಮತ್ತು 3 ರಂದು ದುರ್ಗಾಂಬಿಕಾ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ಭಾನುವಾರ ರಾಜ್ಯಮಟ್ಟದ ಕುರಿಕಾಳಗ ಸ್ಪರ್ಧೆ ನಡೆಯಿತು.
ಭಾನುವಾರ ಆಂಜನೇಯ ಯೂತ್ ಟ್ರಸ್ಟ್ ಸಮಿತಿಯಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ತಾಲ್ಲೂಕಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ದೃಷ್ಠಿಯಿಂದ ಕ್ರೀಡಾಂಗಣದಲ್ಲಿ ಜಿಮ್ ಉಪಕರಣಗಳನ್ನು ಮಂಜೂರು ಮಾಡಿಸಲಾಗಿದೆ. ಮಹಿಳೆಯರಿಗೂ ಪ್ರತ್ಯೇಕವಾಗಿ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ಉದ್ಘಾಟನೆ ಮಾಡಲಾಗುವುದು’ ಎಂದರು.
ತಾಲ್ಲೂಕು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಪುನೀತ್ ಬಣ್ಣಜ್ಜಿ, ‘ಎರಡು ಹಲ್ಲಿನ ಕುರಿ, ನಾಲ್ಕು ಹಲ್ಲು ಮತ್ತು 8 ಹಲ್ಲಿನ ಕುರಿ ಎಂದು ವಿಭಾಗಿಸಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಾದ ಕುರಿಗಳ ಮಾಲೀಕರಿಗೆ ಉತ್ತಮ ಬಹುಮಾನ’ ಎಂದರು.
ಜಾತ್ರೆ ಅಂಗವಾಗಿ ಕೆಸರು ಗದ್ದೆ ಓಟ , ರಂಗೋಲಿ ಸ್ಪರ್ಧೆ, ಕುಸ್ತಿ ಪಂದ್ಯಾವಳಿ ಸೇರಿ ಹಲವು ಸ್ಪರ್ಧೆಗಳು ನಡೆಯಲಿವೆ.
ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್, ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್,ಕಾಯಿಬುರುಡೆ ಮಲ್ಲಿಕಾರ್ಜುನ್, ಚನ್ನೇಶ್, ಚಿಗರಿ ಮಂಜು, ಚಂದ್ರು, ಎಚ್.ಬಿ. ರಾಜು, ರಮೇಶ್, ಉಪೇಂದ್ರ, ನಾಗೇಶ್ ಹಾಗೂ ಆಂಜನೇಯ ಯೂತ್ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಇದ್ದರು.