ದಾವಣಗೆರೆ: ‘ಇತ್ತೀಚಿಗೆ ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅವ್ಯವಹಾರವು ಸಂವಿಧಾನಕ್ಕೆ ಮತ್ತು ರಾಷ್ಟ್ರದ ಕಾನೂನಿಗೆ ವಿರುದ್ಧವಾದುದು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆ. ಆಯೋಗದಲ್ಲಿ ಇಂತಹ ಅವ್ಯವಹಾರ ನಡೆಯುತ್ತಿರುವುದು ನೋಡಿದಾಗ ಪ್ರಜಾಪ್ರಭುತ್ವ ಎಲ್ಲಿಗೆ ಹೋಗುತ್ತಿದೆ ಎಂಬ ಅನುಮಾನ ಕಾಡುತ್ತದೆ’ ಎಂದು ವಿಷಾದಿಸಿದರು.
‘ಇತ್ತೀಚೆಗೆ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿವೃತ್ತ ನ್ಯಾಯಾಧೀಶರು, ಐಎಎಸ್ ಅಧಿಕಾರಿಗಳು, ಗೂಂಡಾಗಳು ಬರುತ್ತಿರುವುದು ನೋಡಿದರೆ ರಾಜಕೀಯದಲ್ಲಿರುವ ಸಂಪಾದನೆ ಬೇರೆಲ್ಲೂ ಇಲ್ಲ ಅನಿಸುತ್ತದೆ. ಈ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗಬೇಕು’ ಎಂದರು.