ದಾವಣಗೆರೆ: ರಕ್ಷಣಾ ವೇದಿಕೆ ಹೆಸರು ಹೇಳಿಕೊಂಡು ದಾವಣಗೆರೆಯ ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿತರಿಂದ ₹ 1.20 ಲಕ್ಷ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯ ಶಿವರಾಜ್ ಚಂದ್ರ ಪಟ್ಟಣ (29), ಹಾಸನದ ರಮ್ಯಾ, ತುಮಕೂರಿನ ಪವಿತ್ರಾ (24), ಚಿಕ್ಕಮಗಳೂರಿನ ಸುರೇಶ್ ಕುಮಾರ (44) ಬಂಧಿತರು.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವತಿಯೊಂದಿಗೆ ದಾವಣಗೆರೆಯ ವ್ಯಕ್ತಿಯು ಯುವತಿಯ ಜೊತೆ ಹೋಂ ಸ್ಟೇನಲ್ಲಿ ಇರುವಾಗ ಈ ಆರೋಪಿಗಳು ‘ನಿಮ್ಮ ಖಾಸಗಿ ಫೋಟೊ ಸೆರೆ ಹಿಡಿದಿದ್ದೇವೆ’ ಎಂದು ಎದುರಿಸಿ ₹ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ‘ಹಣ ಕೊಡದಿದ್ದರೆ ನಿಮ್ಮ ಮನೆಯವರಿಗೆ ತಿಳಿಸುತ್ತೇನೆ’ ಎಂದು ಹೆದರಿಸಿದ್ದಾರೆ. ಆಗ ದೂರುದಾರರು₹ 1.20 ನೀಡಿದ್ದಾರೆ. ಉಳಿದ ಹಣಕ್ಕೂ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.
ಚೀತಾ ಗಸ್ತಿನಲ್ಲಿದ್ದ ಸಿಬ್ಬಂದಿ ನಾಗರಾಜ ಅವರು ಮಾಹಿತಿ ಆಧರಿಸಿ ಸಿಬ್ಬಂದಿಯೊಂದಿಗೆ ಈ ನಾಲ್ವರನ್ನು ಬಂಧಿಸಿದ್ದು, ಅವರಿಂದ ನಗದು, ಒಂದು ಜೆನ್ ಕಾರು ಹಾಗೂ 6 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.