ದಾವಣಗೆರೆ: ‘ಸ್ವತಃ ಮುಖ್ಯಮಂತ್ರಿಯವರೇ ಬಂದು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ತಾಕೀತು ಮಾಡಿದರೂ ಹೆದರದೇ ಚುನಾವಣೆ ಎದುರಿಸಿದ್ದೇನೆ. ನನ್ನ ಹಣಿಯಲು ವಿರೋಧಿಗಳು ಎಲ್ಲ ಅಸ್ತ್ರಗಳನ್ನೂ ಬಳಸಿದರು. ಪಕ್ಷವೊಂದು ಹಣದ ಹೊಳೆಯನ್ನೇ ಹರಿಸಿತು. ಅವರ ಬಳಿ ಇದ್ದ ಕಳ್ಳ ಗಂಟು (ಹಣ) ಹೊರಗೆ ಬರುವಂತೆ ಮಾಡಿದ್ದೇನೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಅವರು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ನಗರದಲ್ಲಿ ಶನಿವಾರ ನಡೆದ ‘ಮತದಾರರಿಗೆ ಕೃತಜ್ಞತಾ ಸಮಾವೇಶ’ದಲ್ಲಿ ಮಾತನಾಡಿ, ‘ನೇಣು ಹಾಕಿಕೊಂಡು ಸಾಯುತ್ತೇನೆಯೇ ಹೊರತು ಯಾರೊಂದಿಗೂ ಡೀಲ್ ಮಾಡಿಕೊಳ್ಳುವುದಿಲ್ಲ. ನನ್ನ ಗೆಲುವನ್ನು ತಡೆಯುವುದಕ್ಕಾಗಿಯೇ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳೆರಡೂ ಡೀಲ್ ಮಾಡಿಕೊಂಡವು. ಚುನಾವಣೆಯಲ್ಲಿ ಬಿಜೆಪಿ ಏಕೆ ತಟಸ್ಥವಾಯಿತು? ಯಾರನ್ನು, ಯಾವ ಕಾರಣಕ್ಕೆ ಗೆಲ್ಲಿಸಲು ತಟಸ್ಥ ನಿಲುವು ತಳೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.
‘ಹರಿಹರ, ಹೊನ್ನಾಳಿ, ದಾವಣಗೆರೆ ದಕ್ಷಿಣ, ಹರಪನಹಳ್ಳಿ ಕ್ಷೇತ್ರಗಳಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಇದೆ. ಚುನಾವಣೆಗೆ ಇನ್ನೂ 4 ವರ್ಷ ಇದೆ. ನಿಮ್ಮ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಬೆಂಬಲಿಗರಿಗೆ ತಿಳಿಸಿದರು.