ಮಾಯಕೊಂಡ: ರಾಜ್ಯದಾದ್ಯಂತ ವಿವಿಧ ಕಾರಣಕ್ಕೆ ಕೋಮು ಸಂಘರ್ಷ ಭುಗಿಲೇಳುತ್ತಿದ್ದರೆ ಸಮೀಪದ ಬಾಡ ಗ್ರಾಮದ ಯುವಕರು ಸೌಹಾರ್ದದಿಂದ ಗಣೇಶೋತ್ಸವ ಆಚರಿಸಿ ಗಮನ ಸೆಳೆದಿದ್ದಾರೆ.
ಇಲ್ಲಿಯ ಮುಸ್ಲಿಂ ಯುವಕರೇ ನೇತೃತ್ವ ವಹಿಸಿ, ಹಿಂದೂ ಯುವಕರೊಂದಿಗೆ ಕೈಜೋಡಿಸಿ ಗಣೇಶೋತ್ಸವ ಏರ್ಪಡಿಸಿ, ಕೋಮು ಸೌಹಾರ್ದ ಮೆರೆದಿದ್ದಾರೆ.
ಬಾಡ ಗ್ರಾಮದಲ್ಲಿ 800 ಕುಟುಂಬಗಳಿದ್ದು, ಅವರಲ್ಲಿ ಸುಮಾರು 140 ಮುಸ್ಲಿಂ ಕುಟುಂಬಗಳಿವೆ. ಪ್ರತಿ ವರ್ಷದಂತೆ ಗ್ರಾಮದ ಮುಖ್ಯ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪಿಸಲು ಎಂ.ಡಿ.ಸುರೇಶ್, ದೇವರಾಜ್, ಪ್ರಕಾಶ್, ನಿರಂಜನ, ಅಮೃತ, ವೀರೇಶ್, ಚಿದಾನಂದ, ಅರುಣ ಮತ್ತಿತರರು ಸಿದ್ದತೆ ನಡೆಸಿದ್ದರು.
ಮುಸ್ಲಿಂ ಯುವಕ ಸೈಫುಲ್ಲಾ ನೇತೃತ್ ವವಹಿಸಿದರು. ಸಮೀರ್, ಮುಬಾರಕ್, ರಫಿ, ಇಮ್ರಾನ್, ಬಾಷಾ ಮತ್ತಿತರರೂ ಅವರೊಂದಿಗೆ ಕೈಗೂಡಿಸಿದರು. ಚಂದಾ ಸಂಗ್ರಹ, ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ಸೇರಿ ಎಲ್ಲದಕ್ಕೂ ಮುಂಚೂಣಿಯಲ್ಲಿದ್ದರು. ಗ್ರಾಮದ ಎಲ್ಲ ಜಾತಿಯ ಯುವಕರೂ ಸಮಿತಿಯಲ್ಲಿದ್ದು ಕೈಜೋಡಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕೆ.ಎಸ್. ಬಸವಂತಪ್ಪ, ವಾಗೀಶ್ ಸ್ವಾಮಿ, ಬಿ.ಟಿ. ಶ್ಯಾಮ್, ಮಾಡಾಳ್ ಮಲ್ಲಿಕಾರ್ಜುನ್ ಭೇಟಿ ನೀಡಿ ಯುವಕರ ಒಗ್ಗಟ್ಟನ್ನು ಪ್ರಶಂಸಿಸಿದರು.