ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗೌರಿ– ಗಣೇಶ ಹಬ್ಬವನ್ನು ಸೋಮವಾರ ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಈ ಬಾರಿ ಕೆಲವರು ಗೌರಿ– ಗಣೇಶ ಹಬ್ಬ ಒಂದೇ ದಿನ ಆಚರಿಸಿದ್ದು, ಸೋಮವಾರ ಮೊದಲು ಗೌರಿಯನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ನಂತರ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಯಿತು.
ಮನೆಗಳಲ್ಲಿ ಗೃಹಿಣಿಯರು ಮಡಿಯಿಂದ ಗೌರಿಯನ್ನು ಪ್ರತಿಷ್ಠಾಪಿಸಿ, ಹೂವುಗಳಿಂದ ಅಲಂಕರಿಸಿ ನಂತರ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಗೌರಿ ಹಬ್ಬದ ದಿನ ಹಿರಿ ಬಾಗಿನ ಹಾಗೂ ಕಿರಿ ಬಾಗಿನ ಕೊಡುವುದು ಹಿಂದಿನಿಂದಲೂ ನಡೆದು ಬಂದಿದೆ. ಕೆಲವು ಮನೆಗಳಲ್ಲಿ ತಟ್ಟೆಯಲ್ಲಿ ಬಾಗಿನ ನೀಡಿದರೆ, ಇನ್ನು ಹಲವರು ಬಿದಿರಿನ ಮೊರಗಳಲ್ಲಿ ಬಾಗಿನ ನೀಡಿದರು.
ಬಾಗಿನದಲ್ಲಿ ಅರಿಸಿನ, ಕುಂಕುಮ, ಬಾಚಣಿಗೆ, ಕಾಡಿಗೆ, ಕನ್ನಡಿ, ಹಸಿರು ಬಳೆ, ರವಿಕೆ ಬಟ್ಟೆ, ಕರ್ಜಿಕಾಯಿ, ವಿವಿಧ ರೀತಿಯ ಹಣ್ಣುಗಳು, ಚಕ್ಕುಲಿ, ಕೋಡುಬಳೆ, ವಿವಿಧ ರೀತಿಯ ತರಕಾರಿ ಹಾಗೂ ತಮ್ಮ ಶಕ್ತಾನುಸಾರ ಹಣವನ್ನು ಇಟ್ಟು ಮುತ್ತೈದೆಯರಿಗೆ ಹಾಗೂ ಕಿರಿಯರಿಗೆ ಬಾಗಿನ ನೀಡಿದರು.
ಗಣೇಶ ಮೂರ್ತಿಯನ್ನು ತಂದು ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ‘ವಿಘ್ನ ನಿವಾರಣೆ ಮಾಡು’ ಎಂದು ಪ್ರಾರ್ಥಿಸಿಕೊಂಡರು. ಬೀದಿ, ಬೀದಿಗಳಲ್ಲಿ ಹಾಗೂ ಆಯಾ ಕಟ್ಟಿನ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಾರ್ಜನಿಕರು ಪೂಜೆ ಸಲ್ಲಿಸಿದರು.
ಹೋಳಿಗೆ, ಕರ್ಜಿಕಾಯಿ, ಪಾಯಸ, ಚಿತ್ರಾನ್ನ, ವಡೆ, ಹಪ್ಪಳ, ಸಂಡಿಗೆ ಮುಂತಾದ ಖಾದ್ಯ ತಯಾರಿಸಿ ಗೌರಿ– ಗಣೇಶನಿಗೆ ನೈವೇದ್ಯ ಮಾಡಿ, ನಂತರ ಮನೆಯಲ್ಲಿ ಸಾಮೂಹಿಕವಾಗಿ ಮನೆಮಂದಿಯೆಲ್ಲ ಕುಳಿತು ಊಟ ಸವಿದರು.