ದಾವಣಗೆರೆ: ಎರಡೂವರೆ ತಿಂಗಳ ನಂತರ ಲಾಕ್ಡೌನ್ ಆಗಿದ್ದ ಧಾರ್ಮಿಕ ದೇವಾಲಯಗಳಲ್ಲಿ ಸೋಮವಾರದಿಂದ ಭಕ್ತರಿಗೆ ದೇವರ ದರ್ಶನ ಭಾಗ್ಯ ದೊರೆಯಲಿದೆ. ಹೋಟೆಲ್ಗಳು ಆತಿಥ್ಯ ನೀಡಲು ಅಣಿಗೊಂಡಿವೆ. ಮಾಲ್ಗಳಲ್ಲೂ ವಸ್ತುಗಳನ್ನು ಖರೀದಿಸಬಹುದು.
ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಲಾಕ್ಡೌನ್ ಆಗಿದ್ದ ಹೋಟೆಲ್ಗಳಲ್ಲಿ ಕೆಲ ದಿನಗಳಿಂದ ಪಾರ್ಸೆಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಜೂನ್ 8ರಿಂದ ಹೋಟೆಲ್ಗಳಲ್ಲೇ ಕುಳಿತು ತಿನ್ನಲು ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆಯಲ್ಲಿ 167 ನೋಂದಣಿಯಾಗಿರುವ ಹೋಟೆಲ್ಗಳು ಇದ್ದು, ಅವುಗಳಲ್ಲಿ ಬೇಕರಿ, ಜ್ಯೂಸ್ ಹಾಗೂ ನಾನ್ವೆಜ್ ಹೋಟೆಲ್ಗಳು ಸೇರಿವೆ. ಸಣ್ಣಪುಟ್ಟ ಹೋಟೆಲ್ಗಳು ಸೇರಿ 440 ಹೋಟೆಲ್ಗಳು ಕೋವಿಡ್ ಮಾರ್ಗಸೂಚಿ ಅನ್ವಯ ಆತಿಥ್ಯ ನೀಡಲು ಸಜ್ಜಾಗಿವೆ.
ಹೋಟೆಲ್ಗಳಲ್ಲಿ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕನಿಷ್ಠ 3 ಅಡಿ ಉದ್ದಕ್ಕೆ ಟೇಬಲ್ಗಳನ್ನು ಜೋಡಿಸಲಾಗಿದೆ. ಗ್ರಾಹಕರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಿರಬೇಕು. ಊಟದ ತಟ್ಟೆ ಹಾಗೂ ಪಾತ್ರೆಗಳನ್ನು ಬಿಸಿನೀರಿನಲ್ಲಿ ಶುಚಿಗೊಳಿಸಿ ನೀಡಲಿವೆ.
ನಗರದ ನಗರದೇವತೆ ದುರ್ಗಾಂಬಿಕಾ ದೇವಾಲಯ, ವೀರಭದ್ರೇಶ್ವರಸ್ವಾಮಿ ದೇವಾಲಯಗಳು ಸೇರಿ ಹಲವು ದೇವಾಲಯಗಳಿಗೆ ಸೋಂಕು ನಿವಾರಕವನ್ನು ಸಿಂಪಡಿಸಲಾಯಿತು. ಇವುಗಳಲ್ಲದೇ ಮಸೀದಿ ಹಾಗೂ ಚರ್ಚ್ಗಳನ್ನು ಸ್ವಚ್ಛಗೊಳಿಸಲಾಯಿತು.
‘ಎಲ್ಲಾ ಗ್ರಾಹಕರನ್ನು ಒಮ್ಮಿಂದೊಮ್ಮೆಲೆ ಬಿಡುವುದಿಲ್ಲ. ಕಡಿಮೆ ಜನರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಬಿಡಲಾಗುವುದು. ಮಕ್ಕಳು ಹಾಗೂ ವೃದ್ಧರಿಗೆ ಪ್ರವೇಶವಿರುವುದಿಲ್ಲ. ಗ್ರಾಹಕರು ವಸ್ತುಗಳನ್ನು ಖರೀದಿಸಿದ ತಕ್ಷಣ ಅಲ್ಲಿ ನಿಲ್ಲದೇ ಹೊರಬರಬೇಕು’ ಎಂದು ಎಸ್ಎಸ್ ಮಾಲ್ನ ಭದ್ರತಾ ಸಿಬ್ಬಂದಿ ಮಾಹಿತಿ ನೀಡಿದರು.