ಚನ್ನಗಿರಿ: ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ₹ 2.10 ಲಕ್ಷ ಮೌಲ್ಯದ ಚಿನ್ನಾಭರಣ, ₹ 27 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಶಿವನಿ ಗ್ರಾಮದ ದೊಂಬರ ಕಾಲೊನಿಯ ಸ್ವಾಮಿ ಅಲಿಯಾಸ್ ನವೀನ್ (29) ಬಂಧಿತ ಆರೋಪಿ.
ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿ ನಾಗರಾಜ ಕೆ.ಎಸ್. ಅವರು ಕಳೆದ ಏಪ್ರಿಲ್ನಲ್ಲಿ ಒಂದು ದಿನ ಬೆಳಿಗ್ಗೆ ಮನೆಗೆ ಬೀಗ ಹಾಕಿ ತೋಟಕ್ಕೆ ಹೋಗಿದ್ದರು. ಸ್ವಲ್ಪ ಹೊತ್ತು ಬಿಟ್ಟು ಮನೆಗೆ ಬಂದಾಗ ಮನೆಯ ಹೆಂಚು ತೆಗೆದು ಯಾರೋ ಒಳ ನುಗ್ಗಿ ಕಳವು ಮಾಡಿರುವುದು ಗಮನಕ್ಕೆ ಬಂದಿತ್ತು. ₹ 10 ಸಾವಿರ ನಗದು, 65 ಗ್ರಾಂ ಚಿನ್ನಾಭರಣ ಕಳವಾಗಿರುವ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚನ್ನಗಿರಿ ಠಾಣೆ ಇನ್ಸ್ಪೆಕ್ಟರ್ ಮಧು ಪಿ.ಬಿ., ಪಿಎಸ್ಐ ರೂಪ್ಲಿ ಬಾಯಿ, ಸಿಬ್ಬಂದಿ ರುದ್ರೇಶ್, ಮಂಜುನಾಥ ಪ್ರಸಾದ್, ಪರಶುರಾಮ, ರೇವಣಸಿದ್ಧಪ್ಪ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಮತ್ತೊಂದು ಕಳವು ಮಾಡಿರುವುದೂ ಗೊತ್ತಾಗಿದೆ.