ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿಗೆ ಭಂಗ ತರಬೇಡಿ; ಬೆನ್ನೆಲುಬಾಗಿ ಇರುವೆ: ಕಾಗಿನೆಲೆ ಶ್ರೀ

Published 10 ಮಾರ್ಚ್ 2024, 6:02 IST
Last Updated 10 ಮಾರ್ಚ್ 2024, 6:02 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ‘ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಂತಿಗೆ ಭಂಗ ಬರದಂತೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೀರಿ. ಜಿಲ್ಲಾಡಳಿತದಿಂದ ಸತ್ಯಶೋಧನಾ ಸಮಿತಿಯನ್ನು ಗೌರವಿಸಬೇಕು. ಸ್ವಯಂ ಪ್ರೇರಿತರಾಗಿ ನಾಮಫಲಕ, ಪ್ರತಿಮೆಗಳನ್ನು ಶುಕ್ರವಾರ ತೆರವುಗೊಳಿಸಿದ್ದೀರಿ. ಇದು ಉಳಿದವರಿಗೆ ಮಾದರಿಯಾಗಿದೆ. ಸೋಮವಾರದವರೆಗೂ ಕಾಯೋಣ. ನಂತರ ನಾನು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ’ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದರು.

ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್‌ಸ್ಥಾಪನೆ ಮತ್ತು ಅನಧಿಕೃತ ಮಹಾದ್ವಾರ ಮತ್ತು ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಿರತ ಹಾಲುಮತ ಸಮಾಜದವರನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಗ್ರಾಮದ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು.

ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ್, ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್, ದಾವಣಗೆರೆ ಗ್ರಾಮಾಂತರ ಸಿಪಿಐ ಕಿರಣ್, ಹರಿಹರ ಗ್ರಾಮಾಂತರ ಸಿಪಿಐ ಪ್ರಶಾಂತ್ ಸಗರಿ ಅವರ ಜೊತೆ ಗುಪ್ತ ಸಮಾಲೋಚನೆ ಮಾಡಿದರು.

ಅಂದಾಜು 150 ಸಿಬ್ಬಂದಿ ಗ್ರಾಮದಲ್ಲಿ ಬಂದೋಬಸ್ತ್‌ಗಾಗಿ ಮೊಕ್ಕಂ ಹೂಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕನ್ನಪ್ಪ, ಮುಖಂಡರಾದ ಯು.ಕೆ.ಅಣ್ಣಪ್ಪ, ಎಚ್.ಎಸ್.ಕರಿಯಪ್ಪ, ಬಿ.ಎನ್.ಕೆಂಚಪ್ಪ, ಹೇಮಂತ್ ರಾಜ್, ಕೆ.ಗೋವಿಂದ, ಡಿ.ಹನುಮಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪವಾಡಿ ಮಂಜಪ್ಪ, ಬಿ.ಎನ್.ಚಂದ್ರಪ್ಪ, ರೇಖಾ, ರೇಣುಕಮ್ಮ ಮತ್ತು ಸುಮಾರು ಸಾವಿರಕ್ಕೂ ಹೆಚ್ಚು ಹಾಲುಮತ ಸಮಾಜದವರು ಪಾಲ್ಗೊಂಡಿದ್ದರು.

ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದರು
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT